ಜನವಾಡ: ರಾಜ್ಯಮಟ್ಟದ ಪಶು ಮೇಳದ ಪ್ರಯುಕ್ತ ತೋಟಗಾರಿಕೆ ಇಲಾಖೆಯು ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುಷ್ಪದಲ್ಲೇ
ಅರಳಿರುವ ವಿಮಾನ ಪ್ರಮುಖ ಆಕರ್ಷಣೆಯಾಗಿದೆ.
ಬೀದರ್ನಿಂದ ನಾಗರಿಕ ವಿಮಾನಯಾನ ಸೇವೆ ಶುರುವಾದ ಸಂದರ್ಭದಲ್ಲಿ ಪುಷ್ಪದಲ್ಲಿ ವಿಮಾನ ರಚಿಸಿರುವುದು ಅರ್ಥಪೂರ್ಣ ವೆನಿಸಿದೆ.
50 ಕೆಜಿ ಗುಲಾಬಿ ಹಾಗೂ ಜಿರೇನಿಯಂ ಹೂವುಗಳನ್ನು ಬಳಸಿ ಸುಂದರವಾದ ವಿಮಾನವನ್ನು ಸೃಷ್ಟಿಸಲಾಗಿದೆ. ಹತ್ತು ಅಡಿ
ಉದ್ದದ ವಿಮಾನವು ಆರು ಅಡಿ ಎತ್ತರ ಹಾಗೂ ನಾಲ್ಕು ಅಡಿ ಅಗಲ ಇದೆ.
‘ಹೂವುಗಳಿಂದ ವಿಮಾನ ಪ್ರತಿಕೃತಿ ತಯಾರಿಸಲು ಒಂದೂವರೆ ದಿನ ತಗುಲಿದೆ. ವಿಮಾನವನ್ನು ವೀಕ್ಷಿಸಿದವರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ ತಿಳಿಸಿದರು.
ತೋಟಗಾರಿಕೆ ಇಲಾಖೆಯ ಮಳಿಗೆಯಲ್ಲಿ ಇನ್ನೂ ಹಲವು ವಿಶೇಷ ಆಕೃತಿಗಳು ಇವೆ. ಹೂವುಗಳಿಂದ ತಯಾರಿಸಿದ ನವಿಲು,
ಹಾಗಲಕಾಯಿಯ ಮೊಸಳೆ, ಬದನೆ ಕಾಯಿಯ ಗರುಡ, ಕಲ್ಲಂಗಡಿಯಲ್ಲಿ ಮಹಾ ಪುರುಷರ ಪ್ರತಿಕೃತಿಗಳು ಇದರಲ್ಲಿ ಸೇರಿವೆ.
ಕಲ್ಲಂಗಡಿಯಲ್ಲಿ ಮಹಾತ್ಮ ಗಾಂಧಿ, ಸುಭಾಚ್ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿ,
ಬಸವಣ್ಣ, ಅಂಬೇಡ್ಕರ್, ತುಮಕೂರಿನ ಸಿದ್ಧಗಂಗಾ ಮಠದ ಲಿಂ.ಶಿವಕುಮಾರ ಸ್ವಾಮೀಜಿ, ತಿರುಪತಿಯ ಬಾಲಾಜಿ,
ದ.ರಾ. ಬೇಂದ್ರೆ ಮೊದಲಾದವರ ಚಿತ್ರಗಳನ್ನು ಕೆತ್ತಲಾಗಿದೆ. ಹಲವು ಬಗೆಯ ಹೂವುಗಳು ಕೂಡ ಪ್ರದರ್ಶನದಲ್ಲಿ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.