ಬೀದರ್: ‘ಸಹಕಾರ ಕ್ಷೇತ್ರದಿಂದ ಮಾತ್ರ ಶೋಷಣೆಮುಕ್ತ ಸಮಾಜ ನಿರ್ಮಾಣ ಸಾಧ್ಯ’ ಎಂದು ಕರ್ನಾಟಕ ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮದ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ಅಭಿಪ್ರಾಯಪಟ್ಟರು.
ಇಲ್ಲಿಯ ಶಿವನಗರದಲ್ಲಿ ಕಲ್ಯಾಣ ಕರ್ನಾಟಕ ಲಿಂಗಾಯತ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಉದ್ಘಾಟಿಸಿ ಅವರು ಮಾತನಾಡಿದರು.
‘ಸಹಕಾರ ವಿಶಾಲ ಕ್ಷೇತ್ರವಾಗಿದೆ. ರೈತರು, ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಜತೆಗೂಡಿ ಕೆಲಸ ಮಾಡಿದ್ದಲ್ಲಿ ಸಮೃದ್ಧ ಸಮಾಜ ಕಟ್ಟಬಹುದಾಗಿದೆ’ ಎಂದು ತಿಳಿಸಿದರು.
ಗ್ರಾಮೀಣ ಕೈಗಾರಿಕೆಗಳ ಇಲಾಖೆ ಉಪ ನಿರ್ದೇಶಕ ರಮೇಶ ಮಠಪತಿ ಮಾತನಾಡಿ, ‘ಸಹಕಾರದ ಬೇರುಗಳು ಬಸವಣ್ಣನವರ ಕಾಯಕ- ದಾಸೋಹ ತತ್ವದಲ್ಲಿ ಅಡಗಿವೆ. ಎಲ್ಲರಿಗಾಗಿ ನಾನು, ಎಲ್ಲರೂ ನನಗಾಗಿ ಎನ್ನುವುದು ಸಹಕಾರದ ಮೂಲಮಂತ್ರ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಲಿಂಗಾಯತ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ಮಾತನಾಡಿ, ‘ಸಹಕಾರಿಯು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಲಿದೆ. ಜನಸಾಮಾನ್ಯರಿಗೆ ಹಲವು ರೀತಿಯಲ್ಲಿ ಉಪಕಾರಿಯಾಗಲಿದೆ’ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಬಸವಗಿರಿಯ ಲಿಂಗಾಯತ ಮಹಾಮಠದ ಪ್ರಭುದೇವರು ಮಾತನಾಡಿ, ‘ಸಮಾಜದಲ್ಲಿ ಎಲ್ಲರೂ ಸುಖವಾಗಿದ್ದರೆ ಮಾತ್ರ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಹೊಸ ಸಹಕಾರ ಸಂಘ ಜನರ ನೆಮ್ಮದಿ ಬದುಕಿಗೆ ವೇದಿಕೆಯಾಗಲಿ’ ಎಂದು ಶುಭ ಹಾರೈಸಿದರು.
ಸಹಕಾರ ಇಲಾಖೆಯ ಬಿ.ಎಚ್. ಸಂಗಮ, ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಬಸವರಾಜ ಶೇರಿಕಾರ ಉಪಸ್ಥಿತರಿದ್ದರು. ಸಹಕಾರಿಯ ನಿರ್ದೇಶಕ ಹಾವಯ್ಯ ಸ್ವಾಮಿ ನಿರೂಪಿಸಿದರು. ನಿರ್ದೇಶಕ ವೈಜಿನಾಥ ಹುಣಚಗೇರಿ ಸ್ವಾಗತಿಸಿದರು. ಬಸವಕಿರಣ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.