ADVERTISEMENT

ಪಿಡಿಒ ನೇಮಿಸದಿದ್ದರೆ ಜಿಪಂ ಎದುರು ಧರಣಿ

ಮುಧೋಳ (ಬಿ) ಗ್ರಾಪಂ ಸದಸ್ಯ ಸೋಮನಾಥ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 17:10 IST
Last Updated 24 ಜನವರಿ 2021, 17:10 IST
ಸೋಮನಾಥ ಮುಧೋಳ
ಸೋಮನಾಥ ಮುಧೋಳ   

ಬೀದರ್: ‘ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮ ಪಂಚಾಯಿತಿಗೆ ವಾರದೊಳಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯನ್ನು ನೇಮಕ ಮಾಡದಿದ್ದರೆ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು’ ಎಂದು ಮುಧೋಳ(ಬಿ) ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಸ್ವಾಮಿ ಮುಧೋಳ ಎಚ್ಚರಿಸಿದ್ದಾರೆ.

‘ಆರು ತಿಂಗಳಿಂದ ಪಿಡಿಒ ಹುದ್ದೆ ಖಾಲಿ ಇದ್ದು, ಬೇರೆ ಪಿಡಿಒಗೆ ಪ್ರಭಾರ ವಹಿಸಲಾಗಿದೆ. ಎಂಟು ತಿಂಗಳಿಂದ ಕಾರ್ಯದರ್ಶಿ ಹುದ್ದೆ ಕೂಡ ಖಾಲಿ ಇದೆ. ಹೀಗಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ’ ಎಂದು ದೂರಿದ್ದಾರೆ.

‘ಗ್ರಾಮದಲ್ಲಿ ತುಂಬಿಕೊಂಡಿರುವ ಬಹುತೇಕ ಚರಂಡಿಗಳು ಸ್ವಚ್ಛತೆ ಕಂಡಿಲ್ಲ. ಸೋಲಾರ್ ದೀಪಗಳು ಕೆಟ್ಟು ನಿಂತಿವೆ. ವೈಯಕ್ತಿಕ ಶೌಚಾಲಯಗಳ ಮಂಜೂರಾತಿಗೆ ವಿಳಂಬ ಆಗುತ್ತಿದೆ. ಮಂಜೂರಾದ ನಂತರವೂ ಮೂರು ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ. ವಸತಿ ಯೋಜನೆ ಮನೆಗಳ ಜಿಪಿಎಸ್ ಹಾಗೂ ಅನುದಾನ ಬಿಡುಗಡೆಗೆ ವಿಳಂಬವಾಗುತ್ತಿದೆ. ಲಿಂಗಾಯತರ ಸ್ಮಶಾನ ಭೂಮಿ ಸಮಸ್ಯೆಗೆ ಪರಿಹಾರ ದೊರಕಿಲ್ಲ’ ಎಂದು ಆಪಾದಿಸಿದ್ದಾರೆ.

ADVERTISEMENT

‘ಕಾಯಂ ಪಿಡಿಒ ಹಾಗೂ ಕಾರ್ಯದರ್ಶಿ ಇಲ್ಲದ ಕಾರಣ ಅನೇಕ ಸಮಸ್ಯೆಗಳು ತಲೆದೋರಿವೆ. ಈಚೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಅವರನ್ನು ಭೇಟಿ ಮಾಡಿ ಕಾಯಂ ಪಿಡಿಒ ಹಾಗೂ ಕಾರ್ಯದರ್ಶಿ ನೇಮಕಕ್ಕೆ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಚಾಯಿತಿ ಅಭಿವೃದ್ಧಿಗೆ ಪೂರಕವಾಗಿ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯಿತಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.