ಬೀದರ್: ಪ್ರಸಕ್ತ ಸಾಲಿನ ಬ್ಯಾಚುಲರ್ ಆಫ್ ಸೋಷಿಯಲ್ ವರ್ಕ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿ ಮಾರ್ಸಿಲೊ ಕಾರ್ಲೊಸ್ ಬೆಂಗಳೂರಿನ ಸೇಂಟ್ ಅಲೊಸಿಯಸ್ ಪದವಿ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಅವರು ಶೇ 89 ರಷ್ಟು ಅಂಕ ಗಳಿಸಿ ಸಾಧನೆಗೈದಿದ್ದಾರೆ.
ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಡಾ. ಫಾದರ್ ಪೀಟರ್ ಮಚಾರ್ಡೊ ಹಾಗೂ ಡಿಆರ್ಡಿಒ ಹಿರಿಯ ವಿಜ್ಞಾನಿ ಡಾ. ಲಲಿತಾ ಕಿಸ್ಟಿ ಅವರು ಜಂಟಿಯಾಗಿ ಪದವಿ ಪ್ರಮಾಣ ಪತ್ರ ಹಾಗೂ ಪ್ರಶಂಸಾ ಪತ್ರ ಪ್ರದಾನ ಮಾಡಿದರು.
ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಕೈಗೊಂಡ ಆಹಾರ ಧಾನ್ಯ, ಪೌಷ್ಟಿಕ ಆಹಾರ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮೊದಲಾದ ಸಾಮಾಜಿಕ ಚಟುವಟಿಕೆ ಹಾಗೂ ಉತ್ತಮ ನಡತೆಗಾಗಿ ಮಾರ್ಸಿಲೊ ಕಾರ್ಲೊಸ್ ಅವರಿಗೆ ರೂ. 5 ಸಾವಿರ ನಗದು ಬಹುಮಾನ, ಫಲಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ‘ಉತ್ತಮ ವಿದ್ಯಾರ್ಥಿ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಕಾಲೇಜು ಪ್ರಾಚಾರ್ಯೆ ಡಾ. ಸಗಾಯಿ ಮೇರಿ ಇದ್ದರು.
ಮಾರ್ಸಿಲೊ ಕಾರ್ಲೊಸ್ ಅವರು ಬೀದರ್ನ ಅರಳು ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಡಾ. ಕೆ.ಟಿ. ಮೆರಿಲ್ ಅವರ ಪುತ್ರರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.