ಬೀದರ್: ಬಹುಜನರ ನಿರೀಕ್ಷೆಯಂತೆ ಕೋವಿಡ್-19 ಮೊಲಿಕ್ಯೂಲರ್ ವೈರಾಲಜಿ ಪ್ರಯೋಗಾಲಯ ಸೋಮವಾರ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯ ಕಟ್ಟಡದಲ್ಲಿ ಸೋಮವಾರ ಕಾರ್ಯಾರಂಭ ಮಾಡಿತು.
ಬಿಮ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿ, ‘ಬೀದರ್ ನಗರದಲ್ಲಿ ಕೋವಿಡ್-19 ಪ್ರಯೋಗಾಲಯ ಆರಂಭವಾಗಿರುವುದು ಸಂತಸ ತಂದಿದೆ. ಕೋವಿಡ್-19 ಸೋಂಕಿತ ರೋಗಿಗಳ ತಪಾಸಣೆಗೆ ಹಾಗೂ ಶೀಘ್ರ ಚಿಕಿತ್ಸೆಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ನಗರದಲ್ಲಿ ವೈರಾಲಜಿ ಪ್ರಯೋಗಾಲಯ ಇರಲಿಲ್ಲ. ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಬೇರೆ ಜಿಲ್ಲೆಗಳಿಗೆ ಕಳಿಸಬೇಕಾಗಿತ್ತು. ಆದರೆ, ನಗರದಲ್ಲಿ ಪ್ರಯೋಗಾಲಯ ಆರಂಭವಾಗಿರುವುದರಿಂದ ಇನ್ನು ವೈದ್ಯಕೀಯ ವರದಿಗಳು ಶೀಘ್ರ ದೊರೆಯಲಿವೆ ಎಂದು ಹೇಳಿದರು.
‘ಬ್ರಿಮ್ಸ್ನ ಮಿನಿ ಜೀವಶಾಸ್ತ್ರ ವಿಭಾಗದ ಅಧೀನದಲ್ಲಿರುವ ಮೊಲಿಕ್ಯೂಲರ್ ವೈರಾಲಜಿ ಪ್ರಯೋಗಾಲಯವನ್ನು ರಾಜ್ಯ ಪ್ರಕೃತಿ ವಿಕೋಪ ನಿಗ್ರಹ ನಿಧಿಯಡಿ ನಿರ್ಮಿಸಲಾಗಿದೆ. ಇದು ಐಸಿಎಂಆರ್ನಿಂದ ಮಾನ್ಯತೆ ಹೊಂದಿದೆ’ ಎಂದು ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ತಿಳಿಸಿದರು.
‘ಇಲ್ಲಿ ಒಬ್ಬರು ಮುಖ್ಯ ಸಂಶೋಧಕರು, ಇಬ್ಬರು ವಿಜ್ಞಾನಿಗಳು ಹಾಗೂ ಪರಿಣಿತ ಪ್ರಯೋಗಾಲಯ ತಂತ್ರಜ್ಞರು ಇರುತ್ತಾರೆ. ಐಸಿಎಂಆರ್ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸುವರು’ ಎಂದು ಹೇಳಿದರು.
‘ಮೂರು ಪಾಳೆಯದಲ್ಲಿ ಹಾಗೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದಲ್ಲಿ ದಿನಕ್ಕೆ 600 ಮಾದರಿಗಳ ಪರೀಕ್ಷೆ ಮಾಡಬಹುದಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ರಹೀಂ ಖಾನ್, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಬೀದರ್ ಉಪ ವಿಭಾಗಾಧಿಕಾರಿ ಅಕ್ಷಯ್ ಶ್ರೀಧರ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿ ಹಾಗೂ ಡಾ.ವಿಜಯಕುಮಾರ ಅಂತಪ್ಪನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.