ಬೀದರ್: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ತಿರಂಗಾ ಯಾತ್ರೆ ಸಂಭ್ರಮದಿಂದ ಸಂಪನ್ನಗೊಂಡಿತು.
ನಗರದ ರಾಣಿ ಚನ್ನಮ್ಮ ವೃತ್ತದಿಂದ ಆರಂಭಗೊಂಡ ತಿರಂಗಾ ಯಾತ್ರೆ ನಗರದ ಪ್ರಮುಖ ಮಾರ್ಗಗಳ ಮೂಲಕ ನೆಹರೂ ಕ್ರೀಡಾಂಗಣದ ವರೆಗೆ ಸಾಗಿತು. ಮಠಾಧೀಶರು, ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಕಾಲೇಜು ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಸಂಭ್ರಮದೊಂದಿಗೆ ಧ್ವಜ ಬೀಸುತ್ತ ನಡೆದರು. ದಟ್ಟ ಕಾರ್ಮೋಡದ ನಡುವೆ ತ್ರಿವರ್ಣ ಧ್ವಜಗಳು ರಾರಾಜಿಸಿದವು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ದೇಶದ ಬಹು ದೊಡ್ಡ ಹಬ್ಬ. ನಮ್ಮೆಲ್ಲರಲ್ಲಿ ಸಂತೋಷ - ಸಂಭ್ರಮ, ಸಡಗರ ಮನೆಮಾಡುತ್ತದೆ. ಜಗತ್ತಿನಲ್ಲಿಯೇ ಭಾರತ ದೇಶ ಭಾವೈಕ್ಯತೆಗೆ ಹೆಸರಾಗಿದೆ. ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆ , ಸಂಸ್ಕೃತಿ, ಆಚಾರ-ವಿಚಾರಗಳಿದ್ದರೂ ಭಾವೈಕ್ಯತೆಯಿಂದ ಕೂಡಿ ಬಾಳುವುದನ್ನು ಇಲ್ಲಿ ನೋಡಬಹುದು. ಸರ್ವಜನಾಂಗದ ಶಾಂತಿಯ ತೋಟವನ್ನು ನಮ್ಮ ಬೀದರ್ ಜಿಲ್ಲೆಯಲ್ಲಿ ಕಾಣಬಹುದು. ಇಲ್ಲಿ ಶಾಂತಿ, ಸಹೋದರತೆ, ಸಹಬಾಳ್ವೆ ನೋಡಬಹುದು. ಭಾವ್ಯಕ್ಯತೆ ಗಟ್ಟಿಗೊಳ್ಳಲು ತಿರಂಗಾ ಯಾತ್ರೆ ಪೂರಕ, ಸಹಕಾರಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಎಲ್ಲರೂ ಭಾವೈಕ್ಯತೆಯಿಂದ ಈ ಭಾವೈಕ್ಯತೆಯ ನಡಿಗೆಯಲ್ಲಿ ಭಾಗವಹಿಸಿದ್ದು ಬಹಳ ಸಂತೋಷದ ವಿಷಯ ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು ಮಾತನಾಡಿ, ಭಾವೈಕ್ಯತೆಯ ಇನ್ನೊಂದು ಹೆಸರೇ ಭಾರತ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ದೇಶ ನಮ್ಮದು. ದೇಶಕ್ಕಾಗಿ ತ್ಯಾಗ- ಬಲಿದಾನ ಮಾಡಿರುವ ದೇಶ ಭಕ್ತರ ದೇಶ ನಮ್ಮದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾಜಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚನಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ . ಎಸ್.ಶ್ರೀಧರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೋಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ವಿಜ್ಡಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಆಸಿಫೊದ್ದಿನ್, ಉದ್ಯಮಿ ಮನಪ್ರೀತ್ ಸಿಂಗ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.