ಬೀದರ್: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಬಸವಕಲ್ಯಾಣದ ಪ್ರವಾಸ ಕಾರ್ಯಕ್ರಮ ಕೊನೆಯ ಗಳಿಗೆಯಲ್ಲಿ ರದ್ದಾಗಿದೆ.
ಶುಕ್ರವಾರ (ಫೆ.9) ಯಡಿಯೂರಪ್ಪನವರು ಬಸವಕಲ್ಯಾಣದ ಆಧುನಿಕ ಅನುಭವ ಮಂಟಪದ ಕಾಮಗಾರಿ ವೀಕ್ಷಣೆಗೆ ಬರುವವರಿದ್ದರು. ಬಳಿಕ ಪಕ್ಷದ ಮುಖಂಡರೊಂದಿಗೆ ಮುಂಬರುವ ಲೋಕಸಭೆ ಚುನಾವಣೆ ಕುರಿತು ಚರ್ಚಿಸುವವರಿದ್ದರು. ‘ಯಡಿಯೂರಪ್ಪನವರ ಆರೋಗ್ಯ ಸರಿ ಇಲ್ಲದ ಕಾರಣ ಪ್ರವಾಸ ರದ್ದುಗೊಳಿಸಿದ್ದಾರೆ. ಫೆಬ್ರುವರಿ ಮೂರನೇ ವಾರದ ನಂತರ ಜಿಲ್ಲೆಗೆ ಬರುತ್ತಾರೆ’ ಎಂದು ಬಿಜಿಪಿ ಜಿ್ಲಾಧ್ಯಕ್ಷ ಸೋಮನಾಥ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಬಸವಕಲ್ಯಾಣದ ಆಧುನಿಕ ಅನುಭವ ಮಂಟಪಕ್ಕೆ ಗುರುವಾರ ₹50 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಅನುದಾನದ ಕೊರತೆಯಿಂದ ಅನುಭವ ಮಂಟಪದ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಅನುಭವ ಮಂಟಪಕ್ಕೆ ಯಡಿಯೂರಪ್ಪನವರು ಭೇಟಿ ಕೊಟ್ಟು ಲಿಂಗಾಯತರ ಗಮನ ಸೆಳೆಯಲು ಮುಂದಾಗಿದ್ದರು. ಈ ವಿಷಯ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಕಾರ್ಯತತ್ಪರವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆಗೊಳಿಸಲು ಯಶಸ್ವಿಯಾಗಿದ್ದಾರೆ. ಈ ಮೂಲಕ ಬಿಜೆಪಿಯವರ ಅದರ ಬಗ್ಗೆ ಮಾತನಾಡದಂತೆ ಮಾಡಿದ್ದಾರೆ. ಈ ವಿಷಯ ಅರಿತೇ ಯಡಿಯೂರಪ್ಪ ಪ್ರವಾಸ ಮೊಟಕುಗೊಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.