ADVERTISEMENT

ಜಿಲ್ಲೆಯಲ್ಲಿ ಗೋಪೂಜೆ; ಸಂಭ್ರಮಾಚರಣೆ

ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 6:24 IST
Last Updated 11 ಡಿಸೆಂಬರ್ 2020, 6:24 IST
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ ಆದ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರು ಗುರುವಾರ ಹುಮನಾಬಾದ್‌ನ ಭವಾನಿ ದೇವಸ್ಥಾನದ ಹತ್ತಿರ ಗೋ ಪೂಜೆ ಸಲ್ಲಿಸಿದರು
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ ಆದ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರು ಗುರುವಾರ ಹುಮನಾಬಾದ್‌ನ ಭವಾನಿ ದೇವಸ್ಥಾನದ ಹತ್ತಿರ ಗೋ ಪೂಜೆ ಸಲ್ಲಿಸಿದರು   

ಬೀದರ್‌: ರಾಜ್ಯ ಸರ್ಕಾರ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ ಮಂಡಿಸಿ ಅಂಗೀಕಾರಗೊಳಿಸಿರುವುದನ್ನು ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ವಿವಿಧ ಸಂಘ–ಸಂಸ್ಥೆಗಳು ಗುರುವಾರ ಜಿಲ್ಲೆಯಲ್ಲಿ ಗೋ ಪೂಜೆ ಸಲ್ಲಿಸಿದರು. ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು.

ತೋಟದಲ್ಲಿ ಪೂಜೆ

ಹುಮನಾಬಾದ್: ಪಶೂಸಂಗೋಪನಾ ಸಚಿವ ಪ್ರಭು ಚವಾಣ್‌ ಅವರು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದ ಹಿನ್ನಲೆಯಲ್ಲಿ ಇಲ್ಲಿನ ಭವಾನಿ ದೇವಸ್ಥಾನದ ಗಿರೀಶ ಪಾಟೀಲ ಅವರ ತೋಟದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಗೋವುಗಳ ಪೂಜಾ ಕಾರ್ಯಕ್ರಮ ನಡೆಯಿತು.

ADVERTISEMENT

ಗೋವುಗಳಿಗೆ ಪೂಜೆ ಸಲ್ಲಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ರಾಜ್ಯ ಸರ್ಕಾರ ಮಸೂದೆ ಮಂಡಿಸಿ ಅಂಗೀಕಾರಗೊಳಿಸಿರುವುದು ಸ್ವಾಗತಾರ್ಹ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತರು, ಕಾರ್ಮಿಕರು, ಬಡ ಜನತೆಯ ಪರವಾದ ಯೋಜನೆಗಳನ್ನು ರೂಪಿಸಿವೆ. ಗೋಹತ್ಯೆ ನಿಷೇಧ ಮಸೂದೆ ಗೋರಕ್ಷಕರಿಗೆ ಸಂತಸ ತಂದಿದೆ’ ಎಂದರು.

ಪುರಸಭೆ ಸದಸ್ಯ ರಮೇಶ ಕಲ್ಲೂರು, ಪಕ್ಷದ ನಗರ ಘಟಕದ ಅಧ್ಯಕ್ಷ ಗಿರೀಶ ಪಾಟೀಲ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಭಾಂಡಾರಿ, ಪ್ರಮುಖರಾದ ಸಂತೋಷ ಸಂಗಮ್, ಬಾಬು ಜಾನವೀರ ಇದ್ದರು.

ತಾಂಡಾದಲ್ಲಿ ಸಂಭ್ರಮಾಚರಣೆ

ಕಮಲನಗರ: ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ನೇತೃತ್ವದಲ್ಲಿ ಘಮಸುಬಾಯಿ ತಾಂಡಾದಲ್ಲಿ ಗೋ ಪೂಜೆ ನೆರವೇರಿಸಲಾಯಿತು.

‘ಗೋಹತ್ಯೆನಿಷೇಧ ಕಾಯ್ದೆ ಜಾರಿಯಾಗಬೇಕು ಎಂದು ಹಲವು ವರ್ಷಗಳ ಗೋ ಸಂರಕ್ಷಕರ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಿದೆ. ನುಡಿದಂತೆ ನಡೆದ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಗೋ ಹತ್ಯೆ ನಿಷೇಧ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರಿಗೆ ಅಭಿನಂದನೆಗಳು’ ಎಂದುರಾಮಶೆಟ್ಟಿ ಪನ್ನಾಳೆ ತಿಳಿಸಿದರು.

ಜಿ.ಪಂ ಸದಸ್ಯ ಮಾರುತಿ ಚವಾಣ್ ಮಾತನಾಡಿ, ‘ಹಿಂದೂ ಸನಾತನ ಧರ್ಮದಲ್ಲಿ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಅಪಾರ ಗೌರವವಿದೆ. ಗೋವುಗಳನ್ನು ಗೋ ಮಾತೆ ಎಂದು ಪೂಜಿಸುವುದನ್ನು ನಾವು ಕಂಡಿದ್ದೇವೆ. ಇಂತಹ ಗೋವುಗಳ ಕಟುಕರ ಕೈಗೆ ಕೊಡುವ ಕೆಟ್ಟ ಸಂಪ್ರದಾಯವನ್ನು ಮಟ್ಟ ಹಾಕುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಇತಿಹಾಸ ನಿರ್ಮಿಸಿದೆ’ ಎಂದು ಹೇಳಿದರು.

ಅಶೋಕ ಅಲಮಾಜೆ, ತಾಪಂ ಸದಸ್ಯ ಪಿ.ಠಾಠೋಡ್, ಅನೀಲಕುಮಾರ, ಭವರಾವ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ತಿನಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.