ಬೀದರ್: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸಲುಸಿದ್ಧತೆ ಮಾಡಿಕೊಳ್ಳುತ್ತಿರುವ ಪಿಯು ವಿದ್ಯಾರ್ಥಿಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ರಾಜ್ಯದಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಬಿಸಿ ತಟ್ಟಿದೆ.
ಸಿಇಟಿಯ ಪಿಸಿಎಂಬಿ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದು ಹಾಗೂ ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ಏ.18ರಂದು ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಫೆ. 18 ಕೊನೆಯ ದಿನ. ಈ ಅವಧಿಯೊಳಗೆ ಮೀಸಲಾತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ತೆಗೆದುಕೊಂಡು ಅರ್ಜಿ ಸಲ್ಲಿಸುವಾಗ ವೆಬ್ಸೈಟಿನಲ್ಲಿ ಅವುಗಳನ್ನು ಅಪ್ಲೋಡ್ ಮಾಡಬೇಕಿದೆ. ಆದರೆ, ಗ್ರಾಮ ಆಡಳಿತ ಅಧಿಕಾರಿಗಳು ಫೆ. 10ರಿಂದ ಮುಷ್ಕರ ನಡೆಸುತ್ತಿರುವುದರಿಂದ ಪ್ರಮಾಣ ಪತ್ರಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ.
ಮೀಸಲಾತಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ
ಗ್ರಾಮ ಆಡಳಿತ ಅಧಿಕಾರಿಗಳು ನೀಡುತ್ತಾರೆ. ಆದರೆ, ಇವರು ಮುಷ್ಕರ ನಡೆಸುತ್ತಿರುವುದರಿಂದ ವಿದ್ಯಾರ್ಥಿ
ಗಳಿಗೆ ತುರ್ತಾಗಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಸರ್ಕಾರ, ಕಂದಾಯ ನಿರೀಕ್ಷಕರಿಗೆ ಇದರ ಜವಾಬ್ದಾರಿ ವಹಿಸಿದೆ. 25ರಿಂದ 30 ಹಳ್ಳಿಗಳಿಗೆ ಒಬ್ಬ ಕಂದಾಯ ನಿರೀಕ್ಷಕರು ಇರುವುದರಿಂದ ಅವರಿಗೂ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ.
‘ದೀರ್ಘಕಾಲೀನ ಬೇಡಿಕೆ
ಈಡೇರಿಸುವವರೆಗೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ. ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದ್ದು, ಈಗಾಗಲೇ ವಿದ್ಯಾರ್ಥಿಗಳು,ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಸರ್ಕಾರ ಕೂಡಲೇ ಸ್ಪಂದಿಸಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದು ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ಅಂಗಡಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಬಬ್ರುವಾಹನ ಬೆಳಮಗಿ ತಿಳಿಸಿದ್ದಾರೆ.
‘ಮೀಸಲಾತಿ ಪ್ರಮಾಣ ಪತ್ರ, 371(ಜೆ) ಪ್ರಮಾಣ ಪತ್ರ ತೆಗೆಸಬೇಕಿದೆ. ಮುಷ್ಕರದಿಂದ ಪ್ರಮಾಣ ಪತ್ರ ತೆಗೆಸಲು ಸಾಧ್ಯವಾಗಿಲ್ಲ. ಸಿಇಟಿ ಪರೀಕ್ಷೆ ಕೈತಪ್ಪಿ ಹೋಗುವ ಆತಂಕವಾಗುತ್ತಿದೆ’ ಎಂದು ಪಿಯು ದ್ವಿತೀಯ ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.
ಅರ್ಹತೆ ಪರಿಶೀಲನೆ ನಡೆಯುತ್ತಿಲ್ಲ
ಮೀಸಲು ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಂಶಾವಳಿ, ವೃದ್ಧಾಪ್ಯ ವೇತನ ಸೇರಿದಂತೆ ಒಟ್ಟು 25 ರೀತಿಯ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿದಾಗ ಗ್ರಾಮ ಆಡಳಿತ ಅಧಿಕಾರಿಗಳು ಅರ್ಹತೆಯನ್ನು ಪರಿಶೀಲಿಸುತ್ತಾರೆ. ಸರ್ಕಾರದ ವಿವಿಧ ಸೇವೆಗಳನ್ನು 20 ಆ್ಯಪ್ಗಳ ಮೂಲಕ ಅವರು ನೀಡುತ್ತಾರೆ. ಮುಷ್ಕರದಿಂದ ಆ ಸೇವೆಗಳಲ್ಲೂ ವ್ಯತ್ಯಯ ಉಂಟಾಗಿದೆ.
ಕಂದಾಯ ಇಲಾಖೆಯ ಆಯುಕ್ತರ ಸೂಚನೆಯಂತೆ ಕಂದಾಯ ನಿರೀಕ್ಷಕರಿಗೆ ತಾತ್ಕಾಲಿಕವಾಗಿ ಲಾಗಿನ್ ನೀಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆಶಿವಕುಮಾರ ಶೀಲವಂತಹೆಚ್ಚುವರಿ ಜಿಲ್ಲಾಧಿಕಾರಿ, ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.