ಬಸವಕಲ್ಯಾಣ: ಹಾರಕೂಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರ 57ನೇ ಜನ್ಮದಿನಾಚರಣೆ ನವೆಂಬರ್ 8 ಮತ್ತು 9ರಂದು ಇಲ್ಲಿನ ತೇರು ಮೈದಾನದಲ್ಲಿನ ಸಭಾಭವನದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ.
ಸಮಾರಂಭದ ಅಂಗವಾಗಿ ಇಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಹಾರಕೂಡದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಸಸ್ತಾಪುರ ಬಂಗ್ಲಾದಿಂದ ಕಾರ್ಯಕ್ರಮದ ಸ್ಥಳದವರೆಗೆ 57 ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ.
ಅಲ್ಲಲ್ಲಿ ಫ್ಲೆಕ್ಸ್, ಕಟೌಟ್ ಅಳವಡಿಸಲಾಗಿದ್ದು, ಬಣ್ಣಬಣ್ಣದ ಪರಾರಿ ಕಟ್ಟಲಾಗಿದೆ. ಎಲ್ಲೆಡೆ ಹಬ್ಬದ ವಾತಾವರಣ ಕಂಡು ಬರುತ್ತಿದೆ.
ನವೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಚಿಂತನಗೋಷ್ಠಿ ಆಯೋಜಿಸಲಾಗಿದೆ. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಡಾ.ಚನ್ನವೀರ ಶಿವಾಚಾರ್ಯರು, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು. ಸಾಹಿತಿ ಡಾ.ಸಂಗಮೇಶ ಸವದತ್ತಿಮಠ ಉದ್ಘಾಟಿಸುವರು.
ಶಾಸಕ ಬಿ.ನಾರಾಯಣರಾವ್ ಅಧ್ಯಕ್ಷತೆ ವಹಿಸುವರು. ಡಾ.ಗವಿಸಿದ್ದಪ್ಪ ಪಾಟೀಲ, ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಡಾ.ಸುಶೀಲಾದೇವಿ ಹೊಳಕುಂದೆ, ರಮೇಶ ರಾಜೋಳೆ, ಶ್ರೀದೇವಿ ಖಂಡಾಳೆ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಜೆ 6 ಗಂಟೆಗೆ 57 ಜನ ಸಾಧಕರಿಗೆ`ಶ್ರೀಚೆನ್ನರತ್ನ' ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ ಉದ್ಘಾಟಿಸುವರು.
ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆ, ಬಸವರಾಜ ಪಾಟೀಲ ಮುರುಮ್, ಶಾಸಕ ರಹೀಂಖಾನ್, ಮಾಜಿ ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಎಂ.ಜಿ.ಮುಳೆ, ಮಲ್ಲಿಕಾರ್ಜುನ ಖೂಬಾ, ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ.ಹಿರೇಮಠ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ನೀಲಕಂಠ ರಾಠೋಡ, ಉಪಾಧ್ಯಕ್ಷ ಸಂಗಮೇಶ ಬಿರಾದಾರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.