ADVERTISEMENT

ಭಾಲ್ಕಿ ಬಸ್‌ ನಿಲ್ದಾಣ; ಅವ್ಯವಸ್ಥೆ ಆಗರ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 5:14 IST
Last Updated 15 ಆಗಸ್ಟ್ 2023, 5:14 IST
ಭಾಲ್ಕಿಯ ಬಸ್‌ ನಿಲ್ದಾಣದ ಮುಂಭಾಗದ ಭಾಲ್ಕಿ- ಹುಮನಾಬಾದ್‌ ಮುಖ್ಯರಸ್ತೆ ಪಕ್ಕವೇ ನಿಲುಗಡೆ ಮಾಡಿರುವ ವಾಹನಗಳು
ಭಾಲ್ಕಿಯ ಬಸ್‌ ನಿಲ್ದಾಣದ ಮುಂಭಾಗದ ಭಾಲ್ಕಿ- ಹುಮನಾಬಾದ್‌ ಮುಖ್ಯರಸ್ತೆ ಪಕ್ಕವೇ ನಿಲುಗಡೆ ಮಾಡಿರುವ ವಾಹನಗಳು   

ಬಸವರಾಜ್‌ ಎಸ್‌.ಪ್ರಭಾ

ಭಾಲ್ಕಿ: ಇಲ್ಲಿಯ ಬಸ್‌ ನಿಲ್ದಾಣದಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳಿವೆ. ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಪುರುಷರ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ಇನ್ನು ಬಸ್‌ ನಿಲ್ದಾಣದಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಇರುವುದರಿಂದ ಭಾಲ್ಕಿ-ಹುಮನಾಬಾದ್‌ ಮುಖ್ಯರಸ್ತೆ ಪಕ್ಕವೇ ದ್ವಿಚಕ್ರ ವಾಹನ, ಖಾಸಗಿ ಜೀಪ್‌, ಬಸ್‌ಗಳು ನಿಲುಗಡೆ ಮಾಡುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಸ್ಥಿತಿ ಎದುರಾಗಿದೆ.

ತಾಲ್ಲೂಕಿನ ನಾನಾ ಗ್ರಾಮಗಳಿಂದ ವಿದ್ಯಾರ್ಥಿಗಳು, ಪ್ರಯಾಣಿಕರು ತಾಲ್ಲೂಕು ಕೇಂದ್ರಕ್ಕೆ ನಿತ್ಯ ವಿವಿಧ ಕಾರ್ಯ ನಿಮಿತ್ತ ಆಗಮಿಸುತ್ತಾರೆ. ವಿಶೇಷವಾಗಿ ಶಾಲೆ, ಕಾಲೇಜು ಬಿಡುವ ಸಮಯವಾದ ಮಧ್ಯಾಹ್ನ, ಸಂಜೆ ಬಸ್‌ ನಿಲ್ದಾಣ ವಿದ್ಯಾರ್ಥಿಗಳು, ಪ್ರಯಾಣಿಕರಿಂದ ತುಂಬಿರುತ್ತದೆ.

ADVERTISEMENT
ಬಸ್‌ ನಿಲ್ದಾಣದ ಗಾತ್ರ ಹೆಚ್ಚಿಸಲು ಸಂಬಂಧಪಟ್ಟವರು ತುರ್ತು ಕ್ರಮ ವಹಿಸಿ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ ಸುರಕ್ಷಿತ ಪ್ರಯಾಣಕ್ಕೆ ಅನುಕೂಲಿಸಬೇಕು.
ಮಲ್ಲಿಕಾರ್ಜುನ ಬಿರಾದಾರ, ರೈತ ಸಂಘದ ಪ್ರಮುಖ

ಆದರೆ, ಬಸ್‌ ನಿಲ್ದಾಣದಲ್ಲಿ ಈಗಾಗಲೇ ಇರುವ ಆಸನಗಳು ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ತುಂಬಾ ಕಡಿಮೆ ಇವೆ. ಕೆಲ ಭಾಗದ ಬಸ್‌ಗಳಿಗೆ ಗಂಟೆಗಟ್ಟಲೇ ಕಾಯಬೇಕಾಗಿದೆ. ಅಷ್ಟು ಸಮಯ ನಿಂತುಕೊಳ್ಳುವುದು ಮಹಿಳೆಯರು, ವಯೋವೃದ್ಧರು, ಅಂಗವಿಕಲರು, ಸೇರಿದಂತೆ ಇತರರಿಗೆ ತುಂಬಾ ಸಮಸ್ಯೆ ಆಗುತ್ತಿದೆ.  ಕಾಂಪೌಂಡ್‌ ಗೋಡೆ ಮೇಲೆ, ಸಮೀಪ ಕುಳಿತು ವಿರಮಿಸುವ ಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.

ವಿದ್ಯಾರ್ಥಿಗಳಿಗೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಆಸನಗಳ ಸಂಖ್ಯೆ ಬಸ್‌ ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸಬೇಕು. ಶೌಚಾಲಯ ದುರವಸ್ಥೆ ಸರಿಪಡಿಸಬೇಕು.
ರೇವಣಸಿದ್ದ ಜಾಡರ್‌, ಎಬಿವಿಪಿ ಪ್ರಮುಖ, ಭಾಲ್ಕಿ

ಬಸ್‌ ನಿಲ್ದಾಣದ ಮುಂಭಾಗದಲ್ಲಿ ಇರುವ ಪುರುಷರ ಶೌಚಾಲಯ ಸ್ವಚ್ಛತೆ, ನಿರ್ವಹಣೆ ಕೊರತೆಯಿಂದ ಗಬ್ಬು ನಾರುತ್ತಿದೆ. ಪ್ರಯಾಣಿಕರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಶೌಚಾಲಯಕ್ಕೆ ತೆರಳಬೇಕಿದೆ.  ಇನ್ನು ಇದು ಮುಖ್ಯರಸ್ತೆ ಪಕ್ಕವೇ ಇರುವುದರಿಂದ ವಿದ್ಯಾರ್ಥಿನಿಯರು, ಮಹಿಳೆಯರು ತುಂಬಾ ಮುಜುಗರ ಪಡುವಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯರು ಸಂಕಷ್ಟ ತೋಡಿಕೊಂಡರು.

ವಿದ್ಯಾರ್ಥಿಗಳಿಗೆ ಅನುಕೂಲಿಸಲು ಕೆಲ ಭಾಗಗಳಲ್ಲಿ ಬಸ್‌ ಟ್ರಿಪ್‌ ಹೆಚ್ಚಿಸಲಾಗಿದೆ. ಆಸನಗಳ ಸಂಖ್ಯೆ ಹೆಚ್ಚಳಕ್ಕೆ ಸ್ಥಳದ ಕೊರತೆಯಿದೆ. ಶೌಚಾಲಯ ಬಂದ್‌ ಮಾಡುವುದಿದೆ.
ಭದ್ರಪ್ಪಾ, ಬಸ್‌ ಡಿಪೊ ವ್ಯವಸ್ಥಾಪಕ, ಭಾಲ್ಕಿ

ಬಸ್‌ ನಿಲ್ದಾಣದ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಉತ್ತಮ ಸವಲತ್ತು ನೀಡಬೇಕು. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಕೆಲ ಪ್ರದೇಶಗಳಿಗೆ ಹೆಚ್ಚಿನ ಬಸ್‌ ಸೌಕರ್ಯ ಒದಗಿಸಬೇಕು ಎಂದು ಎಬಿವಿಪಿ ಪ್ರಮುಖ ರೇವಣಸಿದ್ಧ ಜಾಡರ್‌, ರೈತ ಮುಖಂಡ ಮಲ್ಲಿಕಾರ್ಜುನ ಬಿರಾದಾರ ಒತ್ತಾಯಿಸಿದರು.

ಬಸ್‌ ನಿಲ್ದಾಣದಲ್ಲಿ ಆಸನಗಳ ಕೊರತೆಯಿಂದ ಕಾಂಪೌಂಡ್‌ ಗೋಡೆ ಮೇಲೆ ಸಮೀಪ ಕುಳಿತಿರುವ ವಿದ್ಯಾರ್ಥಿಗಳು
ಬಸ್‌ ನಿಲ್ದಾಣದ ಒಳಗಡೆ ಪಾರ್ಕಿಂಗ್‌ ಮಾಡಿರುವ ವಾಹನಗಳು
ಬಸ್‌ ನಿಲ್ದಾಣದಲ್ಲಿ ಆಸನಗಳ ಕೊರತೆಯಿಂದ ಎದ್ದು ನಿಂತಿಕೊಂಡಿರುವ ಪ್ರಯಾಣಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.