ಹುಮನಾಬಾದ್/ಚಿಟಗುಪ್ಪ: ಹಣಕುಣಿ ಗ್ರಾಮದ ಹುಸೇನಸಾಬ್ ಶೇಕ್ ಅಹ್ಮದ್ ಸಾಬ್ ಅವರ ತೋಟದಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ, ಎಮ್ಮೆ ಕರು ಹಾಗೂ ನಾಯಿಯನ್ನು ಕೊಂದು ಹಾಕಿದೆ.
ತೋಟದ ಮಾಲೀಕ ಚಿರತೆಯನ್ನು ಕಂಡು ಕಿರುಚಿದ್ದಾರೆ. ಆಗ ಅದು ಎಮ್ಮೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೆ ಗುರುತು ಕಂಡು ಚಿರತೆ ಬಂದಿರುವುದನ್ನು ಖಚಿತ ಪಡಿಸಿದ್ದಾರೆ.
ತಾಲ್ಲೂಕಿನ ಕುಡಂಬಲ್ ಗ್ರಾಮದ ಹೊರವಲಯದಲ್ಲೂ ಚಿರತೆ ಕಂಡುಬಂದಿದೆ ಎಂದು ಗ್ರಾಮಸ್ಥರು ಚಿಟಗುಪ್ಪ ಪಟ್ಟಣ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಚಿರತೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಹಣಕುಣಿ ಹಾಗೂ ಕುಡಂಬಲ್ ಗ್ರಾಮಗಳ ರೈತರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಅರಣ್ಯಾಧಿಕಾರಿ ಬಸವರಾಜ ಡಾಂಗೆ ಮಾತನಾಡಿ,‘ಚಿರತೆ ಹೆಚ್ಚಾಗಿ ನಾಯಿಗಳ ಮೇಲೆ ದಾಳಿ ಮಾಡುತ್ತದೆ. ಪ್ರಾಣಿಗಳ ದೇಹದ ಹಿಂಭಾಗ ತಿನ್ನುತ್ತದೆ. ಜನ ಚಿರತೆ ಇದೆ ಎಂದು ತಿಳಿಸಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗ್ರಾಮದಲ್ಲಿ ಮೂರು ಸಿ.ಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಬೋನು ಇಟ್ಟು ಸೆರೆ ಹಿಡಿಯಲಾಗುವುದು’ ಎಂದು ತಿಳಿಸಿದರು.
‘ಅರಣ್ಯಾಧಿಕಾರಿಗಳು ಚಿರತೆ ಇರುವುದನ್ನು ಖಚಿತಪಡಿದ್ದಾರೆ. ಜನರು ಭಯಭೀತರಾಗಿದ್ದಾರೆ. ಎಚ್ಚರಿಕೆಯಿಂದ ಇರುವಂತೆ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.