ಔರಾದ್: ತಾಲ್ಲೂಕಿನಲ್ಲಿ ಶೇ. 50ಮೇಲ್ಪಟ್ಟು ಮುಂಗಾರು ಹಂಗಾಮಿನ ಬಿತ್ತನೆ ಪೂರ್ಣ ಆಗಿದ್ದು, ರೈತರು ಈಗ ಮಳೆ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನ 64, 677 ಹೆಕ್ಟೇರ್ ಪೈಕಿ ಅರ್ಧದಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಇನ್ನು ಬಿತ್ತನೆ ನಡೆಯುತ್ತಿದ್ದು, ಒಂದು ವಾರದ ಹಿಂದೆ ಬಿತ್ತನೆ ಮಾಡಿ ಮೊಳಕೆ ಬರುವ ಹಂತದಲ್ಲಿರುವ ಹೊಲಗಳಿಗೆ ಮಳೆ ಅಗತ್ಯವಿದೆ.
‘ಈ ಬಾರಿ ಮುಂಗಾರು ಪೂರ್ವ ಮತ್ತು ನಂತರ ಉತ್ತಮ ಮಳೆಯಾಗಿದೆ. ಹೀಗಾಗಿ ಮುಂದೆಯೂ ಉತ್ತಮ ಮಳೆಯಾಗುವ ಭರವಸೆಯಿಂದ ಬಿತ್ತನೆ ಮಾಡಿದ್ದೇವೆ. ಆದರೆ ಕಳೆದ ನಾಲ್ಕು ದಿನಗಳಿಂದ ಬೀಸುತ್ತಿರುವ ಗಾಳಿಯಿಂದಾಗಿ ಭೂಮಿ ತೇವಾಂಶ ಕಳೆದುಕೊಳ್ಳುತ್ತಿದೆ. ಹೀಗಾಗಿ ಒಂದೆರಡು ದಿನಗಳಲ್ಲಿ ಮಳೆಯಾಗದೆ ಇದ್ದರೆ ನಾವು ಬಿತ್ತಿದ್ದೆಲ್ಲ ವ್ಯರ್ಥವಾಗಲಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆ ಮಾಡಬೇಕಾಗಿದ್ದು, ಈಗಾಗಲೇ ಶೇ 50 ಮೇಲ್ಪಟ್ಟು ಬಿತ್ತನೆ ಆಗಿದೆ. ಎಲ್ಲ ಕಡೆ ಮೊಳಕೆ ಬರುತ್ತಿದೆ. ಆದರೆ ಒಣ ಗಾಳಿ ಬೀಸುತ್ತಿರುವುದು ಸಮಸ್ಯೆಯಾಗುತ್ತಿದೆ. 2-3 ದಿನಗಳಲ್ಲಿ ಮಳೆಯಾದರೆ ಎಲ್ಲ ಸರಿ ಹೋಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.
ಸೋಯಾಬಿನ್ ಬಿತ್ತನೆಗೆ 75 ರಿಂದ 80 ಮಿ.ಮೀ. ಮಳೆ ಅಗತ್ಯ. ಹೀಗಾಗಿ ರೈತರು ಸಮರ್ಪಕ ಮಳೆಯಾದ ನಂತರ ಬಿತ್ತನೆ ಮಾಡಬೇಕು. ಸೋಯಾಬಿನ್ ಬಿತ್ತನೆಗೆ ಇನ್ನು ಕಾಲಾವಕಾಶವಿದೆ. ಹೀಗಾಗಿ ರೈತರು ಆತಂಕಪಡಬಾರದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.