ಬೀದರ್: ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ಜಿಲ್ಲೆಯ ಔರಾದ್ (1,636), ಬಸವಕಲ್ಯಾಣ (4,691), ಭಾಲ್ಕಿ (2,919), ಬೀದರ್ (12,873), ಹುಮನಾಬಾದ್ (2,585), ಕಮಲನಗರ (1,245), ಹುಲಸೂರ (160), ಚಿಟಗುಪ್ಪ (1,379) ಸೇರಿದಂತೆ ಒಟ್ಟು 27,488 ಜನರ ಇ–ಕೆವೈಸಿ ಬಾಕಿ ಇದೆ. ಪಡಿತರ ಚೀಟಿಯಲ್ಲಿನ ಎಲ್ಲ ಸದಸ್ಯರ ಇ-ಕೆವೈಸಿ ಬೆರಳಚ್ಚು (ಬಯೋಮೆಟ್ರಿಕ್) ಆಗಿದೆಯೋ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪರಿಶೀಲಿಸಿಕೊಳ್ಳಬೇಕು.
ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 8ರ ವರೆಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಇ–ಕೆವೈಸಿ ಮಾಡಿಸಿಕೊಳ್ಳಬಹುದು. ಇದಕ್ಕೆ ಹಣ ಸಂದಾಯ ಮಾಡಬೇಕಿಲ್ಲ. ಸಂಪೂರ್ಣ ಉಚಿತವಾಗಿದೆ. ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ವ್ಯತ್ಯಾಸವಿದ್ದಲ್ಲಿ ಅಂತಹವರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಿಕೊಂಡಲ್ಲಿ ಸರಿಯಾಗುತ್ತದೆ. ಬೆರಳಚ್ಚು ಹೊಂದಾಣಿಕೆ ಆಗದ ಪಡಿತರ ಚೀಟಿ ಸದಸ್ಯರು ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಅಪ್ಡೇಟ್ ಮಾಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.