ADVERTISEMENT

ಬಸವಕಲ್ಯಾಣ ಜಿಲ್ಲಾ ಕೇಂದ್ರಕ್ಕಾಗಿ ಪ್ರಯತ್ನ: ಎನ್‌ಸಿಪಿ ಸೇರ್ಪಡೆಯಾದ ಎಂ.ಜಿ.ಮುಳೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:59 IST
Last Updated 30 ಮಾರ್ಚ್ 2021, 3:59 IST
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಎನ್.ಸಿ.ಪಿ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಿಲಕ ನಂಬಿಯಾರ್, ಎಂ.ಜಿ.ಮುಳೆ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಎನ್.ಸಿ.ಪಿ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಿಲಕ ನಂಬಿಯಾರ್, ಎಂ.ಜಿ.ಮುಳೆ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಬಸವಣ್ಣನವರ ಕಾರ್ಯಕ್ಷೇತ್ರವಾದ ಈ ನಗರ ಜಿಲ್ಲಾ ಕೇಂದ್ರವಾದರೆ ಸಮಗ್ರ ಅಭಿವೃದ್ಧಿ ಹೊಂದಬಲ್ಲದು. ಆದ್ದರಿಂದ ಈ ವಿಷಯ ಮುಖ್ಯವಾಗಿಸಿಕೊಂಡು ಮತದಾರರ ಎದುರು ಹೋಗುವೆ’ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ತಿಳಿಸಿದರು.

ಇಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‌ ತೊರೆದು ಎನ್‌ಸಿಪಿ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಜೆಡಿಎಸ್‌ನಲ್ಲಿದ್ದರೂ ಆ ಪಕ್ಷ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ಈಗ ಆ ಪಕ್ಷವನ್ನು ತೊರೆದಿರುವ ಕಾರಣ ಅದರ ಬಗ್ಗೆ ಹೆಚ್ಚು ಮಾತಾಡುವುದಿಲ್ಲ’ ಎಂದರು.

‘ಬಿಜೆಪಿಯಿಂದ ಜನರಿಗೆ ಮೋಸವಾಗಿದೆ. ಮರಾಠಾ ಅಭಿವೃದ್ಧಿ ನಿಗಮ ರಚಿಸಿದರೂ ಅಧ್ಯಕ್ಷರ ನೇಮಕ ಆಗಿಲ್ಲ. ಮರಾಠಾ ಸಮುದಾಯವನ್ನು 2 ಎಗೆ ಸೇರ್ಪಡೆ ಮಾಡುವ ಭರವಸೆ ನೀಡಿ ಕ್ರಮ ತೆಗೆದುಕೊಂಡಿಲ್ಲ. ನಗರದಲ್ಲಿನ ಶಿವಾಜಿ ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು ಎಂದು ಸುಳ್ಳು ಭರವಸೆ ನೀಡಲಾಗಿದೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಈ ಕ್ಷೇತ್ರದ ಎಲ್ಲ ಸಮಾಜದವರ ಜತೆ ಉತ್ತಮ ಬಾಂಧವ್ಯವಿದ್ದು, ಎಲ್ಲರ ಮತ ಪಡೆಯುವ ಭರವಸೆ ಇದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿಗೆ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಇದ್ದರೂ ಅನ್ಯ ರಾಜ್ಯಗಳಲ್ಲಿ ಇಲ್ಲ. ಪಕ್ಷದ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸುವೆ’ ಎಂದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಿಲಕ ನಂಬಿಯಾರ್, ರಾಜ್ಯ ಘಟಕದ ಕಾರ್ಯದರ್ಶಿಗಳಾದ ಪ್ರಕಾಶ ಮೋರೆ, ರಾಮಭಾವು ಜಾಧವ, ತಾಲ್ಲೂಕು ಘಟಕದ ಅಧ್ಯಕ್ಷ ನಾಮ ಜಾನಾಪುರಕರ್, ಜಿ.ಆರ್.ಖಾನ್, ರಫೀಕ್ ಪಾಲ್ಗೊಂಡಿದ್ದರು.

ನಂತರ ನಡೆದ ಪಕ್ಷದ ಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಅನೇಕ ಕಾರ್ಯಕರ್ತರು ಎನ್‌ಸಿಪಿಗೆ ಸೇರ್ಪಡೆಗೊಂಡರು.

ನಾಮಪತ್ರ: ‘ಎನ್‌ಸಿಪಿ ಅಭ್ಯರ್ಥಿಯಾಗಿ ಎಂ.ಜಿ.ಮುಳೆ ಅವರು ಮಂಗಳವಾರ ಬೆಳಿಗ್ಗೆ 10ಕ್ಕೆ ನಾಮಪತ್ರ ಸಲ್ಲಿಸುವರು. ಮೆರವಣಿಗೆ, ಸಭೆ ಇರುವುದಿಲ್ಲ’ ಎಂದು ಎನ್‌ಸಿಪಿ ರಾಜ್ಯ ಕಾರ್ಯ ದರ್ಶಿ ರಾಮಭಾವು ಜಾಧವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.