ಬಸವಕಲ್ಯಾಣ: ನಗರದ ಮಿನಿ ವಿಧಾನಸೌಧದ ಎದುರಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ ಎಂಬ ಊಹಾಪೋಹ ನಂಬಿ ಶನಿವಾರ ಸಾವಿರಾರು ಮಹಿಳೆಯರು ಸೇರಿದ್ದರಿಂದ ಕೆಲಕಾಲ ಗೊಂದಲ
ಸೃಷ್ಟಿಯಾಗಿತ್ತು.
ವಿವಿಧ ಗ್ರಾಮಗಳ ಮಹಿಳೆಯರು ಕಚೇರಿ ಸಮಯಕ್ಕೂ ಮೊದಲೇ ಇಲ್ಲಿ ಬಂದು ಕುಳಿತಿದ್ದರು. ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವುದು ಗೊತ್ತಾದ ಕೂಡಲೇ ಪೊಲೀಸರು ಬಂದೋಬಸ್ತ್ ಕೈಗೊಂಡು ಮಹಿಳೆಯರಿಗೆ ಸಾಲಾಗಿ ಕುಳಿತುಕೊಳ್ಳುವಂತೆ ಹೇಳಿದರು. ಆದರೆ, ಸಮಯ ಸಾಕಷ್ಟಾದರೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ಅಲ್ಲಿದ್ದವರನ್ನು ಮನೆಗೆ ಕಳುಹಿಸುವುದಕ್ಕೆ ಪ್ರಯತ್ನಿಸಲಾಯಿತು. ಆದರೂ, ಯಾರೂ ಹೋಗಲಿಲ್ಲ.
ಸುದ್ದಿ ತಿಳಿದು ಶಾಸಕ ಶರಣು ಸಲಗರ ಹಾಗೂ ತಹಶೀಲ್ದಾರ್ ಸಾವಿತ್ರಿ ಸಲಗರ ಕೂಡ ಸ್ಥಳಕ್ಕೆ ಬಂದು ಎಲ್ಲರನ್ನು ಸಮಾಧಾನ ಪಡಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಸಂಪರ್ಕಿಸಿದರಾದರೂ ಯಾರೂ ಬರಲಿಲ್ಲ.
ಕೊನೆಗೆ ‘ನಿಮ್ಮ ನಿಮ್ಮ ಊರುಗಳಿಗೆ ಬಂದು ಎಲ್ಲರಿಗೂ ಕಿಟ್ ನೀಡಲಾಗುವುದು. ಇಲ್ಲಿ ಕುಳಿತು ಗದ್ದಲ ಮಾಡಬೇಡಿ. ದಯವಿಟ್ಟು ಇಲ್ಲಿಂದ ತೆರಳಿ’ ಎಂದು ಶಾಸಕರು ಕೇಳಿಕೊಂಡಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂತು. ಮಧ್ಯಾಹ್ನದ ನಂತರವೇ ಮಹಿಳೆಯರು ತಮ್ಮ ತಮ್ಮ ಗ್ರಾಮಗಳತ್ತ ತೆರಳಿದರು.
ಪಟ್ಟಣ ಠಾಣೆ ಸಿಪಿಐ ಜೆ.ಎಸ್.ನ್ಯಾಮಗೌಡ, ಸಬ್ಇನ್ಸ್ಪೆಕ್ಟರ್ ಅಮರ ಕುಲಕರ್ಣಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.