ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ಐತಿಹಾಸಿಕ ಗುತ್ತಿಬಸವಣ್ಣ ದೇಗುಲದಲ್ಲಿ ಗುರುವಾರದಿಂದ ಭಾನುವಾರದವರೆಗೆ ನಡೆದ ಜಾತ್ರೋತ್ಸವದಲ್ಲಿ ಭಕ್ತರಿಗೆ ನಾಲ್ಕು ಅಂಗಡಿಗಳಲ್ಲಿ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಅಧ್ಯಾತ್ಮಿಕ ಜ್ಞಾನದ ಅರಿವು ಮೂಡಿಸುವ ಹರಿಯಾಣ ರಾಜ್ಯದ ಬರವಾಲಾದಲ್ಲಿಯ ಸತ್ಯಲೋಕ ಆಶ್ರಮದ ಇಪ್ಪತ್ತು ಜನ ಸೇವಾಧಾರಿಯವರು ನಾಲ್ಕು ಅಂಗಡಿಗಳನ್ನು ಆರಂಭಿಸಿ ಅವುಗಳ ಮೂಲಕ ಜಾತ್ರೆಗೆ ಬಂದ ಭಕ್ತರಿಗೆ ಉಚಿತವಾಗಿ ಗ್ರಂಥಗಳನ್ನು ವಿತರಿಸಿದ್ದಾರೆ.
‘ಸಮಾಜದಲ್ಲಿ ಭಾವೈಕ್ಯತೆ ಸಾರುವ ಜೀವವೇ ನಮ್ಮ ಜಾತಿ, ಮಾನವ ಧರ್ಮ ನಮ್ಮದು. ಹಿಂದೂ ಮುಸ್ಲಿಂ, ಸಿಖ್, ಕ್ರೈಸ್ತ ಯಾವ ಧರ್ಮವೂ ಬೇರೆ ಅಲ್ಲ, ಎಲ್ಲವುಗಳ ಸಾರ ಮಾನವ ಕಲ್ಯಾಣವೇ ಆಗಿದೆ’ ಎಂಬ ಮೂಲ ಸಂದೇಶ ಸಾರುವ ಕನ್ನಡ, ಹಿಂದಿ ಭಾಷೆಯಲ್ಲಿ ರಚಿಸಿದ ಇಪ್ಪತ್ತಕ್ಕೂ ಹೆಚ್ಚಿನ ಪುಸ್ತಕಗಳನ್ನು ಮಳಿಗೆಗಳಲ್ಲಿ ಉಚಿತವಾಗಿ ವಿತರಿಸಲಾಯಿತು.
ಸತ್ಯಲೋಕ ಆಶ್ರಮದ ಸೇವಾಧಾರಿ ಅಂಬ್ರಿಶ್ ದಾಸ ಮಾತನಾಡಿ, ‘ತತ್ವದರ್ಶಿ ಸಂತ ರಾಮಪಾಲ್ ಮಹಾರಾಜರ ಸಂದೇಶ ಆಶ್ರಮದ ಮೂಲಕ ದೇಶದೆಲ್ಲೆಡೆ ಪ್ರಸಾರ ಮಾಡುತ್ತಿದ್ದು, ಲೋಕ ಕಲ್ಯಾಣ ಮೂಲ ಮಂತ್ರವಾಗಿದೆ, ಸಮಾಜದಲ್ಲಿಯ ಮೂಢ ನಂಬಿಕೆ, ಅಂಧಶ್ರದ್ಧೆ, ಅಜ್ಞಾನ ಕಳೆದು ಎಲ್ಲೆಡೆ ಸುಜ್ಞಾನ ಮೂಡಿಸುವ ಕಾರ್ಯ ಪ್ರವಚನ, ಪುಸ್ತಕಗಳ ಮೂಲಕ ನಡೆಯುತ್ತಿದೆ’ ಎಂದರು.
ವಿಷ್ಣುರೆಡ್ಡಿ ದಾಸ ಮಾತನಾಡಿ, ಜಾತ್ರೆಯಲ್ಲಿ ಉಚಿತವಾಗಿ ಅಧ್ಯಾತ್ಮಿಕ ಸಾಹಿತ್ಯದ ಗ್ರಂಥ ನೀಡುತ್ತಿದ್ದರೂ ಜನ ಅವುಗಳು ಸ್ವೀಕರಿಸಲು ಹಿಂಜರಿಯುತ್ತಿರುವುದು ನೋವಾಗುತ್ತಿದೆ ಎಂದರು.
ಆಕಾಶ ದಾಸ, ತಗಡು ದಾಸ, ಅಶ್ವಿನಿ ದಾಸಿ, ಮಮತಾ ದಾಸಿ, ಪಲ್ಲವಿ ದಾಸಿ ಹಾಗೂ ಇತರರು ಮುಂಜಾನೆಯಿಂದ ಸಂಜೆವರೆಗೂ ಪುಸ್ತಕ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.