ADVERTISEMENT

ಇಂದು ಸಾರ್ವಜನಿಕ ಗಣಪತಿಗಳ ವಿಸರ್ಜನೆ

ಸುಲ್ತಾನಪುರ ಕ್ವಾರಿಯಲ್ಲಿ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 18:30 IST
Last Updated 5 ಸೆಪ್ಟೆಂಬರ್ 2019, 18:30 IST
ಬೀದರ್ ತಾಲ್ಲೂಕಿನ ಸುಲ್ತಾಪುರ ಬಳಿ ಇರುವ ಕ್ವಾರಿಯಲ್ಲಿ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲು ಸ್ಥಳ
ಬೀದರ್ ತಾಲ್ಲೂಕಿನ ಸುಲ್ತಾಪುರ ಬಳಿ ಇರುವ ಕ್ವಾರಿಯಲ್ಲಿ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲು ಸ್ಥಳ   

ಬೀದರ್: ನಗರದಲ್ಲಿ ಪ್ರತಿಷ್ಠಾಪನೆಯಾಗಿರುವ ಸಾರ್ವಜನಿಕ ಗಣಪತಿಗಳ ವಿಸರ್ಜನಾ ಮೆರವಣಿಗೆ ಸೆ.6ರಂದು ಸಂಜೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಲಿದೆ.

ತಾಲ್ಲೂಕಿನ ಸುಲ್ತಾನಪುರ ಸಮೀಪದ ಗುರುನಾಥ ಕೊಳ್ಳೂರ ಅವರ ಕಲ್ಲಿನ ಗಣಿಯಲ್ಲಿರುವ ಹೊಂಡದಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆಗೆ ಸ್ಥಳ ಹಾಗೂ ಮೆರವಣಿಗೆ ಮಾರ್ಗವನ್ನೂ ಗೊತ್ತುಪಡಿಸಲಾಗಿದೆ.

ಮೆರವಣಿಗೆಯು ಬಸವೇಶ್ವರ ವೃತ್ತದಿಂದ ನಯಾಕಮಾನ್, ಚೌಬಾರಾ, ಗವಾನ್ ಚೌಕ್, ಶಹಾಗಂಜ್ ಕಮಾನ್‌ ಮೂಲಕ ಅಂಬೇಡ್ಕರ್ ವೃತ್ತ, ನಾವದಗೇರಿ ಮಾರ್ಗವಾಗಿ ಚಿಕ್ಕಪೇಟ, ರಿಂಗ್‌ರೋಡ್‌ ಮೂಲಕ ಮಲ್ಕಾಪುರ, ಸುಲ್ತಾನಪುರ ಮಾರ್ಗವಾಗಿ ಕ್ವಾರಿಗೆ ತೆರಳಲಿದೆ.

ADVERTISEMENT

‘ಮಾಂಜ್ರಾ ನದಿಯಲ್ಲಿ ನೀರಿಲ್ಲದ ಕಾರಣ ನೀರಿರುವ ಸ್ಥಳದಲ್ಲಿ ಗಣೇಶ ವಿಸರ್ಜನೆಗೆ ಜಿಲ್ಲಾ ಆಡಳಿತದಿಂದ ವ್ಯವಸ್ಥೆ ಮಾಡಲಾಗಿದೆ’ ಎಂದು ನಗರಸಭೆ ಆಯುಕ್ತ ಬಸಪ್ಪ ತಿಳಿಸಿದ್ದಾರೆ.

ಗಣೇಶ ಮಹಾಮಂಡಳಿಯ ವತಿಯಿಂದ ನಗರದ ಚೌಬಾರದಲ್ಲಿ ಸಾರ್ವಜನಿಕ ಗಣೇಶ ಮಂಡಳಗಳ ಗಣಪತಿ ಮೂರ್ತಿಗಳ ಮೆರವಣಿಗೆಗೆ ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಸಂಸದ ಭಗವಂತ ಖೂಬಾ, ಶಾಸಕರಾದ ರಹೀಂ ಖಾನ್‌, ಬಂಡೆಪ್ಪ ಕಾಶೆಂಪೂರ, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಬಿ.ನಾರಾಯಣರಾವ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್‌, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ ಸಿಂಗ್, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಾಟೀಲ ಅಷ್ಟೂರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಶಿವರತನ್ ಮಾಲಾಣಿ, ಡಿ.ವಿ. ಸಿಂದೋಲ್, ಬಿ.ಜಿ.ಶೆಟಕಾರ ಪಾಲ್ಗೊಳ್ಳುವರು.


ಮದ್ಯ ಮಾರಾಟ ನಿಷೇಧ:ಗಣೇಶ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಬೀದರ್‌ ತಾಲ್ಲೂಕಿನಲ್ಲಿ ಸೆ.6ರ ಬೆಳಿಗ್ಗೆ 6 ಗಂಟೆಯಿಂದ ಸೆ.7ರ ಬೆಳಿಗ್ಗೆ 6ರವರೆಗೆ, ಬಸವಕಲ್ಯಾಣ ತಾಲ್ಲೂಕಿನಲ್ಲಿ ಸೆ.10ರ ಬೆಳಿಗ್ಗೆ 6ರಿಂದ ಸೆ.11ರ ಬೆಳಿಗ್ಗೆ 6ರವರೆಗೆ ಹಾಗೂ ಸೆ.12ರ ಬೆಳಿಗ್ಗೆ 6ರಿಂದ ಸೆ.13ರ ಬೆಳಿಗ್ಗೆ 6ರವರೆಗೆ, ಭಾಲ್ಕಿ ತಾಲ್ಲೂಕಿನಲ್ಲಿ ಸೆ.8ರ ಬೆಳಿಗ್ಗೆ 6ರಿಂದ ಸೆ.9ರ ಬೆಳಿಗ್ಗೆ 6ರವರೆಗೆ, ಸೆ.10ರ ಬೆಳಿಗ್ಗೆ 6ರಿಂದ ಸೆ.11ರ ಬೆಳಿಗ್ಗೆ 6ರವರೆಗೆ, ಸೆ.12ರ ಬೆಳಿಗ್ಗೆ 6ರಿಂದ 13ರ ಬೆಳಿಗ್ಗೆ 6ರವರೆಗೆ, ಔರಾದ್ ತಾಲ್ಲೂಕಿನಲ್ಲಿ ಸೆ.8ರ ಬೆಳಿಗ್ಗೆ 6ರಿಂದ ಸೆ.9ರ ಬೆಳಿಗ್ಗೆ 6ರ ವರೆಗೆ, ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.8ರ ಬೆಳಿಗ್ಗೆ 6ರಿಂದ ಸೆ.9ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.