ಬೀದರ್: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಂಗಳವಾರ ಇಲ್ಲಿಯ ಬ್ರಿಮ್ಸ್ ಬೋಧಕ ಆಸ್ಪತ್ರೆಯ ‘ತೀವ್ರ ನಿಗಾ ಘಟಕ’ದ ಒಳಗೇ ತೆರಳಿ ರೋಗಿಗಳಿಗೆ ಹಣ್ಣು ವಿತರಿಸಿದರು. ಬಿಜೆಪಿ ಕಾರ್ಯಕರ್ತರು ಚಪ್ಪಲಿ ಧರಿಸಿಯೇ ಐಸಿಯು ಪ್ರವೇಶಿಸಿದ್ದು ರೋಗಿಗಳ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಯಿತು.
ಸಚಿವರು, ಸಂಸದ–ಶಾಸಕರುತಮ್ಮ ಪಾದರಕ್ಷೆಗಳನ್ನು ಐಸಿಯು ಹೊರಗೆ ಬಿಟ್ಟು ಒಳಗಡೆ ಇದ್ದ ಸ್ಲಿಪರ್ ಹಾಕಿಕೊಂಡು ರೋಗಿಗಳ ಕ್ಷೇಮ ವಿಚಾರಿಸಿದರು.
ಆದರೆ ಚವಾಣ್ ಬೆಂಬಲಿಗರು ಚಪ್ಪಲಿ ಹಾಕಿಕೊಂಡೇ ಐಸಿಯು ಒಳಗೆ ನುಗ್ಗಿದರು. ಆಸ್ಪತ್ರೆಯ ಸಿಬ್ಬಂದಿ ಮನವಿ ಮಾಡಿದರೂ ಕಿವಿಕೊಡಲಿಲ್ಲ. ಹೀಗಾಗಿ ಅಲ್ಲಿಂದ ಹೊರಗೆ ಹೋಗುವಂತೆರೋಗಿಗಳ ಸಂಬಂಧಿಕರೇ ಕಾರ್ಯಕರ್ತರಿಗೆ ಹೇಳಿದರು.ಐಸಿಯುನಲ್ಲಿ ಗದ್ದಲ ಶುರುವಾದಾಗ ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯಕುಮಾರ ಅಂತಪ್ಪನವರ್, ಕಾರ್ಯಕರ್ತರಿಗೆ ಹೊರಗೆ ಕಳಿಸಿದರು.
ಸಚಿವರು ಅಪ್ರಾನ್ ಹಾಗೂ ಕೈಗವಸು ಧರಿಸದೇ ಐಸಿಯುಗೆ ಬಂದಿದ್ದರಿಂದ ವೈದ್ಯಕೀಯ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು. ನಿಯಮ ಪಾಲನೆಯಾಗದಿರುವುದು ಮನವರಿಕೆಯಾದ ನಂತರ ಸಚಿವರು ಒಳರೋಗಿಗಳ ವಿಭಾಗಕ್ಕೆ ತೆರಳಿ, ಮಲಗಿದ್ದ ರೋಗಿಗಳನ್ನು ಎಬ್ಬಿಸಿ ಸೇಬು, ಬಾಳೆಹಣ್ಣು ಹಾಗೂ ಬಿಸ್ಕತ್ ವಿತರಿಸಿದರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.