ADVERTISEMENT

ಬೀದರ್‌: ಹೆದ್ದಾರಿ ದುರಸ್ತಿಗೆ ಗುರುನಾಥ ವಡ್ಡೆ ಆಗ್ರಹ

ದೆಹಲಿಯಲ್ಲಿ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 15:15 IST
Last Updated 2 ಸೆಪ್ಟೆಂಬರ್ 2020, 15:15 IST
ಗುರುನಾಥ ವಡ್ಡೆ
ಗುರುನಾಥ ವಡ್ಡೆ   

ಬೀದರ್‌: ಔರಾದ್–ಬೀದರ್‌ ರಾಷ್ಟ್ರೀಯ ಹೆದ್ದಾರಿ ಹಾಗೂ ಮಾಂಜ್ರಾ ಸೇತುವೆಯ ಭಾಗದಲ್ಲಿ ಕುಸಿದಿರುವ ಭಾಗವನ್ನು ಒಂದು ವಾರದಲ್ಲಿ ದುರಸ್ತಿ ಪಡಿಸಿ ಸಂಚಾರಕ್ಕೆ ಅನುಕೂಲಮಾಡಿಕೊಡದಿದ್ದರೆ. ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡಕರಿ
ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿರುವ ಗುರುನಾಥ ಅವರು ಗಡಿನಾಡ ಜನರ ಹಿತದೃಷ್ಟಿಯಿಂದ ಹೆದ್ದಾರಿ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ಔರಾದ್‌ ತಾಲ್ಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ಮಾರ್ಗದಲ್ಲಿರುವ ಮಾಂಜ್ರಾ ನದಿ ಸೇತುವೆ ಸ್ಥಳದಲ್ಲಿ ನಿರಂತರ ಮಳೆಯಿಂದ ಭೂಕುಸಿತವಾಗಿ ಅರ್ಧ ರಸ್ತೆ ಹಾಳಲಾಗಿದೆ. ಜಿಲ್ಲಾಡಳಿತ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಸಂಖ್ಯೆ 161(ಎ) ಮೇಲೆ ಕರ್ನಾಟಕ, ತೆಲಂಗಾಣ, ಹಾಗೂ ಮಹಾರಾಷ್ಟ್ರ ಪ್ರಯಾಣಿಕರು ನಿತ್ಯ ಪ್ರಯಾಣಿಸುತ್ತಾರೆ. ಸೇತುವೆ ಕುಸಿದರೆ ಸಂಪೂರ್ಣ ಸಂಚಾರ ಸ್ಥಗಿತಗೊಳ್ಳಲಿದೆ. ಹೆದ್ದಾರಿ ಸಂಪೂರ್ಣ ಕೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದ್ವಿಚಕ್ರವಾಹನ ಸವಾರರು ನಿತ್ಯ ಅಪಘಾತಕ್ಕೆಗೊಳಗಾಗುತ್ತಿದ್ದಾರೆ. ಹೆದ್ದಾರಿ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.