ಹುಮನಾಬಾದ್: ದಿನಸಿ ಪದಾರ್ಥಗಳ ಬೆಲೆ ಸತತವಾಗಿ ಏರಿಕೆ ಆಗುತ್ತಿರುವುದು ಜನ ಸಾಮಾನ್ಯರಿಗೆ ಜೀವನ ನಡೆಸಲು ತೊಂದರೆಯನ್ನು ಉಂಟು ಮಾಡಿದೆ. ಕೋವಿಡ್– 19 ಸಂಕಷ್ಟದಲ್ಲಿ ಸಿಲುಕಿ ಪರದಾಡುತ್ತಿರುವ ಬಡವರಿಗೆ ಮತ್ತು ಕೊಲಿ ಕಾರ್ಮಿಕರ ಜೀವನದ ಮೇಲೆ ಬರೆ ಎಳೆಂದತಾಗಿದೆ.
‘ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಅದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ಮಾಡಿರುವ 14 ದಿನಗಳ ಕರ್ಫ್ಯೂ ಬಂಡವಾಳ ಮಾಡಿಕೊಂಡು ತರಕಾರಿ, ಹಣ್ಣು, ಕಿರಾಣ ದಿನಸಿ ಪದಾರ್ಥಗಳ ಬೆಲೆ ಹೆಚ್ಚಿಸಿ, ಕೆಲವರು ಗ್ರಾಹಕರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ನಿವಾಸಿ ಶಶಿಕುಮಾರ ಮಾಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
‘ಸಣ್ಣಪುಟ್ಟ ಅಂಗಡಿಯವರೂ ಅಗತ್ಯ ವಸ್ತುಗಳ ಬೆಲೆಯನ್ನು ಲಾಕ್ಡೌನ್ ನೆಪ ಹೇಳಿಕೊಂಡು ಸುಮಾರು ₹5ರಿಂದ ₹8 ಗೆ ಹೆಚ್ಚಿಸಿದ್ದಾರೆ. ಪ್ರಶ್ನಿಸಿದರೆ ಬೆಲೆ ಜಾಸ್ತಿಯಾಗಿದೆ ಎಂದು ಹೇಳುತ್ತಿದ್ದಾರೆ. ಬಿಲ್ ಸಹ ಕೊಡುವುದಿಲ್ಲ’ ಎಂದು ಚೀನ್ಕೇರಾ ಗ್ರಾಮಸ್ಥ ವೆಂಕಟೇಶ ಅಸಮಾಧಾನ ವ್ಯಕ್ತಪಡಿಸಿದರು.
‘ಲಾಕ್ಡೌನ್ ಜಾರಿ ಆದಾಗಿನಿಂದ ದಿನಸಿ ಪದಾರ್ಥಗಳಲ್ಲಿ ಏರಿಕೆಯಾಗಿದೆ. ಒಂದು ತಿಂಗಳ ಜೀವನ ನಿರ್ವಹಣೆಗೆ ₹3 ಸಾವಿರ ಸಾಕಾಗುತ್ತಿತ್ತು. ಆದರೆ ಸದ್ಯ ₹6000 ಕೂಡ ಸಾಕಾಗುತ್ತಿಲ್ಲ’ ಎಂದು ಆಟೊ ಚಾಲಕ ರಮೇಶ ತಮ್ಮ ಅಳಲು ತೋಡಿಕೊಂಡರು.
‘ಬೆಲೆ ಹೆಚ್ಚಿಸಿದರೆ ಅಂಗಡಿ ಸೀಜ್’
ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಬೆಲೆ ಹೆಚ್ಚಳದ ಬಗ್ಗೆ ಪರಿಶೀಲಿಸಲಾಗಿದೆ. ತಾಲ್ಲೂಕಿನ ಪ್ರತಿಯೊಂದು ಅಂಗಡಿ ಮಾಲೀಕರು ಅಂಗಡಿ ಮುಂದೆ ನಿಗದಿತ ಬೆಲೆಯ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕು ಎಂದು ಸೂಚಿಸಲಾಗಿದೆ. ನಿಗದಿತ ಬೆಲೆಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದರೆ, ಅಂಗಡಿ ಸೀಜ್ ಮಾಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಜೈಶ್ರೀ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.