ADVERTISEMENT

ನೆರೆ ರಾಜ್ಯದ ಪೊಲೀಸರ ಸಹಕಾರ ಅಗತ್ಯ

ಅಂತರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಎಸ್‌ಪಿ ನಾಗೇಶ ಡಿ.ಎಲ್. ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 4:57 IST
Last Updated 14 ಡಿಸೆಂಬರ್ 2020, 4:57 IST
ಬೀದರ್ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಅಂತರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು
ಬೀದರ್ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಅಂತರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು   

ಬೀದರ್: ‘ಜಿಲ್ಲೆಯ ಗಡಿಭಾಗದಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಪ್ರಕರಣಗಳನ್ನು ದಾಖಲಿಸಲು ಬೇರೆ ರಾಜ್ಯಗಳ ಪೊಲೀಸ್ ಇಲಾಖೆಯ ಸಹಕಾರ ಅಗತ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಗಡಿಯಲ್ಲಿ ಅಪರಾಧ ತಡೆಗೆ ಸಂಬಂಧಿಸಿದಂತೆ ನಡೆದ ಅಂತರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಗಡಿಭಾಗಗಳಲ್ಲಿ ಕೊಲೆ, ಕಿಡ್ನಾಪ್, ಮಿಸ್ಸಿಂಗ್ ಇನ್ನಿತರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವರದಿ ಆಗುತ್ತಿವೆ. ಬೇರೆ ರಾಜ್ಯಗಳ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಪತ್ತೆ ಹಚ್ಚಲು ಜಿಲ್ಲೆಯ ಎಲ್ಲಾ ಗಡಿಭಾಗದ ಪೊಲೀಸ್ ಅಧಿಕಾರಿಗಳು ಸಹಕರಿಸಿ ಮಾಹಿತಿ ಹಂಚಿಕೊಳ್ಳುವಂತೆ’ ಸೂಚಿಸಿದರು.

ADVERTISEMENT

‘ಈಗಾಗಲೇ ಕೋವಿಡ್– 19 ಲಾಕ್‌ಡೌನ್‌ ಸಂದರ್ಭದಲ್ಲಿ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪೊಲೀಸ್ ನಿರೀಕ್ಷಕರು, ಅಧಿಕಾರಿಗಳ ಸಂಪರ್ಕದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಲಾಗಿದೆ. ಆದರೂ ಕೂಡ ಗಡಿಗಳಲ್ಲಿ ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ ಎನ್ನಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆರೋಪಿಗಳ ಪತ್ತೆ ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ವಹಿಸುವುದು ಅಗತ್ಯವಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್ ಮಾತನಾಡಿ, ‘ಅಂತರ್‌ ರಾಜ್ಯ ಗಡಿಗಳಲ್ಲಿ ಪ್ರಕರಣಗಳನ್ನು ತಡೆಯಲು ಆರೋಪಿಗಳನ್ನು ಗುರುತಿಸಲು ಅವರ ಕೈಬೆರಳು ಗುರುತಿನೊಂದಿಗೆ ಪ್ರಕರಣ ದಾಖಲಿಸಿಕೊಳ್ಳಬೇಕು. ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಬೇರೆ ರಾಜ್ಯದಿಂದ ಆಗಮಿಸಿ ಇನ್ನೊಂದು ರಾಜ್ಯದಲ್ಲಿ ವಾಸಿಸುತ್ತಾರೆ. ಇಂತವರನ್ನು ಗುರುತಿಸಲು ಅಂತರ್‌ರಾಜ್ಯ ಗಡಿ ಪೊಲೀಸರ ಸಹಕಾರ ಬೇಕಾಗುತ್ತದೆ’ ಎಂದರು.

ಸಭೆಯಲ್ಲಿ ಬೀದರ್‌ ವಿಭಾಗದ ಡಿವೈಎಸ್‌ಪಿ ಸೇರಿದಂತೆ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.