ಭಾಲ್ಕಿ: ಮುಂಗಾರು ಬಿತ್ತನೆಗೆ ರೈತರಿಗೆ ಬಿತ್ತನೆ ಬೀಜದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಯ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇರೂರು, ಸಿದ್ದೇಶ್ವರ, ಭಾಲ್ಕಿ ಪಟ್ಟಣದ ಭೀಮ ನಗರ ಏರಿಯಾ ಸೇರಿ ಸುಮಾರು 20 ಕಡೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ದೂರು ಬಂದಿವೆ. ತಕ್ಷಣವೇ ನೀರಿನ ಸಮಸ್ಯೆ ಬಗೆಹರಿಸಬೇಕು. ಟ್ಯಾಂಕರ್, ತೆರೆದ ಹಾಗೂ ಕೊಳವೆ ಬಾವಿ ಮೂಲಕ ಖಾಸಗಿಯಾಗಿ ನೀರು ನೀಡಿದ ಎಲ್ಲರಿಗೂ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕು ವ್ಯಾಪ್ತಿಯಲ್ಲಿ ಕೊರೊನಾ ಕಾಲಿಟ್ಟಿದ್ದು, ಇದು ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪೂರ್ವ ಸಿದ್ಧತೆ ಇಲ್ಲದೇ ಸರ್ಕಾರ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಈ ಎಲ್ಲ ಅವಾಂತರಗಳು ನಡೆದಿವೆ. ಆದರೂ ಯಾರು ಭಯಪಡಬೇಕಿಲ್ಲ ಎಂದು ಹೇಳಿದರು.
ಚಳಕಾಪೂರ ಸೋಂಕಿತ ವ್ಯಕ್ತಿ ಗುಣಮುಖರಾಗಿ ಬಿಡುಗಡೆ ಆಗಿರುವುದು ನೆಮ್ಮದಿ ತಂದಿದೆ. ಇನ್ನೂ ಹಲ್ಸಿ (ಎಲ್), ಭಾತಂಬ್ರಾ ಗ್ರಾಮದ ಸೋಂಕಿತರು ಕೂಡ ಚೇತರಿಸಿಕೊಂಡಿದ್ದು, ಎರಡು ಮೂರು ದಿನಗಳಲ್ಲಿ ಬಿಡುಗಡೆ ಆಗಲಿದ್ದಾರೆ ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ಕ್ರಿಯಾಶೀಲರಾಗಿ ಸೋಂಕಿತರಿಂದ ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ ಸಂಪರ್ಕ ಸಾಧಿಸಿದ ಎಲ್ಲ ಜನರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಬೇಕು. ಮತ್ತು ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ತಿಳಿ ಹೇಳಬೇಕು ಎಂದರು.
ಕೊರೊನಾ ಹರಡುವಿಕೆ ಭೀತಿ ಇರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಅತ್ಯಂತ ಜಾಗರೂಕತೆಯಿಂದ ನಡೆಸಿ ಮಕ್ಕಳಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು. ಚಳಕಾಪೂರ, ಧನ್ನೂರು, ಶಿವಣಿ ಸೇರಿದಂತೆ ಮುಂತಾದ ಗ್ರಾ.ಪಂಚಾಯಿತಿಯಲ್ಲಿ ನರೇಗಾದಡಿ ನೀಡುತ್ತಿರುವ ಕೂಲಿ ಕೆಲಸ ಸ್ಥಗಿತಗೊಳಿಸಿದ್ದು, ತಕ್ಷಣವೇ ಎಲ್ಲ ಕಡೆಗಳಲ್ಲಿ ನರೇಗಾದಡಿ ಕೆಲಸ ನೀಡಬೇಕು.
ತಾ.ಪಂ.ಉಪಾಧ್ಯಕ್ಷ ಮಾರುತಿ ರಾವ್ ಮಗರ್, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಡಿವೈಎಸ್ಪಿ ಡಾ.ದೇವರಾಜ್ ಬಿ ಹಾಗೂ ತಾ.ಪಂ ಎಡಿ ಶಿವಲೀಲಾ ಇದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.