ಬೀದರ್: ‘ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರಾಭವಗೊಳ್ಳಲು ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಇವರ ಗುಂಪಿನವರೇ ಕಾರಣ. ಸೋಲಿನ ಹೊಣೆ ಹೊತ್ತು ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.
‘ಈ ಬಾರಿ ಕಾಂಗ್ರೆಸ್ಗೆ ಗೆಲ್ಲುವ ಅವಕಾಶ ಇತ್ತು. ಈಶ್ವರ ಖಂಡ್ರೆ ಹಾಗೂ ಬಸವರಾಜ ಜಾಬಶೆಟ್ಟಿ ತಮ್ಮದೆದೇ ಆದ ಅಕ್ರಮ ಕೂಟ ರಚಿಸಿಕೊಂಡಿದ್ದರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ದೂರ ಉಳಿಯುವಂತಾಗಿತ್ತು. ಅದು ಪಕ್ಷದ ಸೋಲಿಗೂ ಕಾರಣವಾಯಿತು’ ಎಂದು ಆರೋಪಿಸಿದ್ದಾರೆ.
‘ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ (ಶಾಸಕರಿದ್ದಾರೆ. ಪಕ್ಷದ ಇಬ್ಬರು ಸಚಿವರು ಹಾಗೂ ಒಬ್ಬರು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಇದ್ದಾರೆ. ಜೆಡಿಎಸ್ನ ಒಬ್ಬರು ಸಚಿವರಿದ್ದರೂ ಅವರನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಪ್ರಮುಖ ಹುದ್ದೆಯಲ್ಲಿರುವವರು ಕಾರ್ಯಕರ್ತರತ್ತ ಬೊಟ್ಟು ಮಾಡಬಾರದು. ಬೇರೆಯವರ ಮುಖಕ್ಕೆ ಮಸಿ ಬಳಿಯಲು ಹೋದರೆ ಮೊದಲು ನಮ್ಮ ಕೈಗೆ ಮಸಿ ಅಂಟಿಕೊಳ್ಳುತ್ತದೆ ಎನ್ನುವುದು ಅರಿತುಕೊಳ್ಳಬೇಕು’ ಎಂದು ಹೇಳಿದ್ದಾರೆ.
‘ಪಕ್ಷದ ನೇತೃತ್ವ ವಹಿಸಿರುವ ಮುಖಂಡರು ಸ್ವಪ್ರತಿಷ್ಠೆಯನ್ನು ಬದಿಗಿರಿಸಬೇಕು. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಸ್ವಪ್ರತಿಷ್ಠೆ ಹಾಗೂ ಮುಖಂಡರಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿಯೇ ಪಕ್ಷ ಸೋಲು ಅನುಭವಿಸಿದೆ’ ಎಂದು ಪ್ರತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.