ADVERTISEMENT

ಬಿಜೆಪಿಗೆ ಕೋಲಿ ಸಮಾಜ ಬೆಂಬಲ: ಬಾಬುರಾವ್ ಚಿಂಚನಸೂರ

ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 3:24 IST
Last Updated 10 ಏಪ್ರಿಲ್ 2021, 3:24 IST
ಬಸವಕಲ್ಯಾಣ ಉಪ ಚುನಾವಣೆ ಪ್ರಯುಕ್ತ ಹುಮನಾಬಾದ್ ಸಮೀಪದ ಶಕ್ತಿ ದಾಲ್ ಮಿಲ್ ಆವರಣದಲ್ಲಿ ನಡೆದ ಸಭೆಯ ನಂತರ ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಟೋಕರಿ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಜಗನ್ನಾಥ ಜಮಾದಾರ, ವಾಲ್ಮೀಕಿ ಖನಕೋರೆ ಅವರು ಬೆಂಬಲಿಗರ ಜತೆ ಚರ್ಚೆಯಲ್ಲಿ ತೊಡಗಿದ್ದರು
ಬಸವಕಲ್ಯಾಣ ಉಪ ಚುನಾವಣೆ ಪ್ರಯುಕ್ತ ಹುಮನಾಬಾದ್ ಸಮೀಪದ ಶಕ್ತಿ ದಾಲ್ ಮಿಲ್ ಆವರಣದಲ್ಲಿ ನಡೆದ ಸಭೆಯ ನಂತರ ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಟೋಕರಿ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಜಗನ್ನಾಥ ಜಮಾದಾರ, ವಾಲ್ಮೀಕಿ ಖನಕೋರೆ ಅವರು ಬೆಂಬಲಿಗರ ಜತೆ ಚರ್ಚೆಯಲ್ಲಿ ತೊಡಗಿದ್ದರು   

ಬಸವಕಲ್ಯಾಣ: ‘ಬಸವಕಲ್ಯಾಣ ತಾಲ್ಲೂಕಿನ ಗಡಿಯಲ್ಲಿರುವ ಶಕ್ತಿ ದಾಲ್‌ಮಿಲ್‌ ಆವರಣದಲ್ಲಿ ಶುಕ್ರವಾರ ನಡೆದ ಕೋಲಿ ಸಮಾಜದ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರಗೆ ಬೆಂಬಲಿಸಲು ನಿರ್ಧರಿಸಲಾಗಿದೆ’ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ತಿಳಿಸಿದ್ದಾರೆ.

‘ಹುಮನಾಬಾದ್‌ ಸಮೀಪದ ಶಕ್ತಿ ದಾಲ್‌ಮಿಲ್‌ನಲ್ಲಿ ದುರ್ಗಾಪೂಜೆ ಆಯೋಜಿಸಲಾಗಿತ್ತು. ಬಸವಕಲ್ಯಾಣ ತಾಲ್ಲೂಕಿನ ಟೋಕರಿ ಕೋಲಿ ಸಮಾಜದವರ ಸಮಾವೇಶ ನಡೆಸಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸಮಾವೇಶದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಭಗವಂತ ಖೂಬಾ, ಕಲಬುರ್ಗಿ ಸಂಸದ ಉಮೇಶ ಜಾಧವ, ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ, ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಬೊಕ್ಕೆ, ಶಾಲಿನಿ ವಾಡಿಕರ್, ವಾಲ್ಮೀಕಿ ಖನಕೋರೆ, ಸಂಜಯ ವಾಡಿಕರ್ ಮೊದಲಾದ ಪ್ರಮುಖರು ಪಾಲ್ಗೊಂಡಿದ್ದರು’ ಎಂದು ತಿಳಿಸಿದರು.

ADVERTISEMENT

‘ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆಯಿದೆ. ಅಲ್ಲದೆ ಬಿಜೆಪಿ ಸರ್ಕಾರ ಬಸವಕಲ್ಯಾಣದಲ್ಲಿ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹ 2 ಕೋಟಿ ಮಂಜೂರು ಮಾಡಿ 5 ಎಕರೆ ಜಮೀನು ಒದಗಿಸಿದೆ. ಅಲ್ಲದೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬೇಡಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ ಕಾರಣ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲು ಸಹಮತ ವ್ಯಕ್ತವಾಯಿತು’ ಎಂದು ಹೇಳಿದರು.

ಹಿರಿಯ ಮುಖಂಡ ವಾಲ್ಮೀಕಿ ಖನಕೋರೆ ಮಾತನಾಡಿ,‘ಶನಿವಾರದಿಂದ ಬಸವಕಲ್ಯಾಣ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಬಿಜೆಪಿ ಪರ ಪ್ರಚಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.