ಔರಾದ್: ‘ವಿದ್ಯಾರ್ಥಿಗಳಲ್ಲಿ ಕಾನೂನಿನ ಬಗ್ಗೆ ಗೌರವ ಇರಬೇಕು’ ಎಂದು ಇಲ್ಲಿಯ ನ್ಯಾಯಾಧೀಶ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಅಮರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನಿನ ಬಗ್ಗೆ ತಿಳಿಯದೇ ಇರುವವರು ತಪ್ಪು ಮಾಡುತ್ತಾರೆ. ಹೀಗಾಗಿ ಕಾನೂನಿನ ತಿಳಿವಳಿಕೆ ಇದ್ದರೆ ಅಪರಾಧಗಳು ಕಡಿಮೆಯಾಗುತ್ತವೆ. ಪೋಕ್ಸೋ ಅಂತಹ ಸೂಕ್ಷ್ಮ ಕಾಯ್ದೆಗಳ ಬಗ್ಗೆ ತಿಳಿವಳಿಕೆ ಅವಶ್ಯ ಎಂದರು.
ಏಡ್ಸ್ ಕಾಯ್ದೆ ಕೂಡ ಅಷ್ಟೇ ಸೂಕ್ಷ್ಮ ಮತ್ತು ಸಂವೇದನಶೀಲವಾಗಿದೆ. ಎಚ್ಐವಿ ಸೋಂಕಿತರು ಇಲ್ಲವೇ ಏಡ್ಸ್ ರೋಗಿಗಳ ಬಗ್ಗೆ ಸಾರ್ವಜನಿಕರು ತಾರತಮ್ಯ ಮಾಡಲು ಅವಕಾಶ ಇರುವುದಿಲ್ಲ’ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ ಮಾತನಾಡಿ,‘ಏಡ್ಸ್ ರೋಗಕ್ಕೆ ಅರಿವು ಎಂಬ ಔಷಧವೇ ರಾಮಬಾಣವಾಗಿದೆ. ಈ ರೋಗದ ಭಯಾನಕ ಪರಿಣಾಮ ತಿಳಿದುಕೊಂಡವರು ಏಡ್ಸ್ ರೋಗಕ್ಕೆ ಬಲಿಯಾಗುವುದಿಲ್ಲ. ವಿದ್ಯಾರ್ಥಿಗಳು ಈ ರೋಗದ ಕುರಿತು ಜಾಗೃತರಾಗಿರಬೇಕು’ ಎಂದು ಸಲಹೆ ನೀಡಿದರು.
ವಕೀಲ ವಿಜಯ ಜಾಧವ ಅವರು ಪೋಕ್ಸೋ ಕಾಯ್ದೆ ಕುರಿತು, ಡಾ. ಪುಷ್ಪಾಂಜಲಿ ಪಾಟೀಲ ಅವರು ಎಚ್ಐವಿ ಮತ್ತು ಏಡ್ಸ್ ಬಗ್ಗೆ ಉಪನ್ಯಾಸ ಮಂಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್.ಶಟಕಾರ ಮಾತನಾಡಿದರು. ಪ್ರಾಂಶುಪಾಲ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಿ.ಡಿ.ಬೋಳೆಗಾವೆ ನಿರೂಪಿಸಿದರು.
ಔರಾದ್ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಅಮರೇಶ್ವರ ಪದವಿ-ಪೂರ್ವ ಕಾಲೇಜು ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.