ADVERTISEMENT

ಬೀದರ್‌| ಪೊಲೀಸ್‌ ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಅಗತ್ಯ: ನಾಗನಾಥ

ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಪಿ.ಎಸ್.ಐ. ನಾಗನಾಥ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 8:19 IST
Last Updated 2 ಏಪ್ರಿಲ್ 2023, 8:19 IST
ಬೀದರ್‌ನ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನಬಸವಣ್ಣ ಎಸ್‌.ಎಲ್‌. ಧ್ವಜ ಬಿಡುಗಡೆ ಮಾಡಿದರು
ಬೀದರ್‌ನ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನಬಸವಣ್ಣ ಎಸ್‌.ಎಲ್‌. ಧ್ವಜ ಬಿಡುಗಡೆ ಮಾಡಿದರು   

ಬೀದರ್‌: ‘ಪೊಲೀಸರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಪೊಲೀಸ್‌ ಇಲಾಖೆ ಹಾಗೂ ಅಧಿಕಾರಿಗಳಿಗೂ ಒಳ್ಳೆಯ ಹೆಸರು ಬರುತ್ತದೆ’ ಎಂದು ನಿವೃತ್ತ ಪಿ.ಎಸ್.ಐ ನಾಗನಾಥ ಹೇಳಿದರು.
ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಪೊಲೀಸರ ಕಾರ್ಯ ಸೂಕ್ಷ್ಮ ಹಾಗೂ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಬದ್ಧತೆಯಿಂದ ಕೆಲಸ ಮಾಡುವವರಿಗೆ ಪ್ರತಿ ಫಲ ಸಿಕ್ಕೆ ಸಿಗುತ್ತದೆ. ಯಾವುದೇ ಕೆಲಸವಿದ್ದರೆ ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಕೆಲಸ ಮಾಡಬಹುದು. ಹಿಂದೆ ನಾವು ಕೆಲಸ ಮಾಡುವಾಗ ಇಷ್ಟೊಂದು ಸೌಲಭ್ಯಗಳು ಇರಲಿಲ್ಲ. ಕೆಲ ಗ್ರಾಮಗಳಿಗೆ ಬಸ್ಸಿನ ಸೌಕರ್ಯವೂ ಇರಲಿಲ್ಲ. ಇಂದು ಸಾರಿಗೆ ಸಂಪರ್ಕ ಉತ್ತಮವಾಗಿದೆ‘ ಎಂದು ತಿಳಿಸಿದರು.

‘ಪೊಲೀಸರು ಆರೋಗ್ಯ ಸೌಲಭ್ಯ ಪಡೆಯಲು ದೂರದ ‌ಬೆಂಗಳೂರಿಗೆ ಹೋಗಬೇಕಾಗುತ್ತದೆ. ಬೀದರ್ ಅಥವಾ ಹೈದರಾಬಾದ್‌ನ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಬೇಕು. ಪೊಲೀಸ್ ಕಾಲೊನಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಪೊಲೀಸರು ವಾಹನ ಖರೀದಿಸಲು ಸಾಲ ಸೌಲಭ್ಯ ಒದಗಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್. ಎಲ್ ಪ್ರಾಸ್ತಾವಿಕವಾಗಿ ಮಾತನಾಡಿ, ‘1965 ರ ಏಪ್ರಿಲ್ 2 ರಂದು ಜಾರಿಗೆ ಬಂದ ಪೊಲೀಸ್ ಕಾಯ್ದೆ ಸವಿ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ನಿವೃತ್ತ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಾರ್ಯವನ್ನು ಸ್ಮರಿಸಲಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪೊಲೀಸರಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ. ಪೊಲೀಸರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಪಡೆಯುವ ಮಕ್ಕಳಿಗೆ ಬಹುಮಾನ. ಕಂಪ್ಯೂಟರ್ ತರಬೇತಿ ಕೇಂದ್ರ. ಟೆನಿಸ್ ಕೋರ್ಟ್. ಪೊಲೀಸ್ ಜಿಮ್. ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗೆ ಹೆಲ್ತ್‌ ಕಾರ್ಡ್ ಸೌಲಭ್ಯ. ಗುರುತಿನ ಚೀಟಿ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮ ಒದಗಿಸಿಕೊಡಲಾಗಿದೆ‘ ಎಂದರು.

ಇದೇ ಸಂದರ್ಭದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಬಿಡುಗಡೆ ಮಾಡಲಾಯಿತು. ಪೊಲೀಸ್ ಪಡೆಯ 6 ತುಕಡಿಗಳು ಕಾರ್ಯಕ್ರಮಕ್ಕೆ ಅಗಮಿಸಿದ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದವು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ. ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಶಿಲ್ಪಾ ಎಂ. ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.