ADVERTISEMENT

'ನೆಲದ ಋಣ ತೀರಿಸುವುದು ಪ್ರತಿಯೊಬ್ಬರ ಜವಾಬ್ದಾರಿ'

ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರ ಸೂರ್ಯವಂಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 12:41 IST
Last Updated 13 ಜನವರಿ 2021, 12:41 IST
ಬೀದರ್‌ನಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತು’ ಸಂವಾದ ಕಾರ್ಯಕ್ರಮದಲ್ಲಿ ಓಂಪ್ರಕಾಶ ದಡ್ಡೆ – ರೇಣುಕಾ ದಂಪತಿಯನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತು’ ಸಂವಾದ ಕಾರ್ಯಕ್ರಮದಲ್ಲಿ ಓಂಪ್ರಕಾಶ ದಡ್ಡೆ – ರೇಣುಕಾ ದಂಪತಿಯನ್ನು ಸನ್ಮಾನಿಸಲಾಯಿತು   

ಬೀದರ್: ‘ತಾಯಿ ನೆಲದ ಋಣ ತೀರಿಸುವುದು ಪ್ರತಿಯೊಬ್ಬರು ಜವಾಬ್ದಾರಿಯಾಗಿದೆ’ ಎಂದು ಪದವಿ ಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರ ಸೂರ್ಯವಂಶಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಗರದಲ್ಲಿ ಈಚೆಗೆ ಆಯೋಜಿಸಿದ್ದ‘ಮನೆಯಂಗಳದಲ್ಲಿ ಮಾತು’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ನೇತೃತ್ವದ ತಂಡ ಯಾವುದೇ ಭೇದಭಾವ, ಗುಂಪುಗಾರಿಕೆ ಸೃಷ್ಟಿಯಾಗದಂತೆ ಪ್ರತಿಯೊಬ್ಬರನ್ನು ಕೈಹಿಡಿದುಕೊಂಡು ನಡೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕನ್ನಡ ಹಾಗೂ ನೆಲದ ಸಂಸ್ಕೃತಿ ನೆಲೆಯೂರುವಂತೆ ಮಾಡುತ್ತಿದ್ದಾರೆ’ ಎಂದು ಬಣ್ಣಿಸಿದರು.

ಸಾಹಿತಿ ಓಂಪ್ರಕಾಶ ದಡ್ಡೆ ಮಾತನಾಡಿ, ‘ನಮ್ಮ ಬದುಕು, ಬರಹ ಒಂದಾಗಿರಬೇಕು. ಸಾಮಾಜಿಕ ಅನಿಷ್ಠಗಳನ್ನು ತೊಡೆದು ಹಾಕಲು ಪ್ರತಿಯೊಬ್ಬರು ಮುಂದೆ ಬರಬೇಕು’ ಎಂದರು.

ADVERTISEMENT

‘ಮೂರು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಕಲ್ಮೂಡದ ದತ್ತ ದಿಗಂಬರ ಆಶ್ರಮದ ಶಾಲಾ ಜೀವನ ನನ್ನಲ್ಲಿ ಶಿಸ್ತು, ಸಮಯಪ್ರಜ್ಞೆ ಬೆಳೆಸಿತು. ಪ್ರೊ.ವೀರೇಂದ್ರ ಸಿಂಪಿ, ಮಮಾ ಬೋರಾಳಕರ್, ಶ್ರೀಕಾಂತ ಪಾಟೀಲ, ದೇಶಾಂಶ ಹುಡಗಿ ಮೊದಲಾದ ಸಾಹಿತಿಗಳ ಒಡನಾಟದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಯಿತ’ ಎಂದು ಹೇಳಿದರು.

‘ಹೆಜ್ಜೆ’ ಕವನ ಸಂಕಲನ, ‘ಕವಿಗಳು ಕಂಡ ಬಸವಣ್ಣ’. 'ಮಗು ನೀ ಜ್ಞಾನಿಯಾಗು' 'ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ' ' ಮಕ್ಕಳಿಗಾಗಿ ನಾವು', 'ಬೇಮಳಖೇಡ ಇತಿಹಾಸ', ‘ವೈಜ್ಞಾನಿಕ ದೃಷ್ಟಿಯಲ್ಲಿ ವಿಭೂತಿ' ವೈಚಾರಿಕ ಲೇಖನಗಳ ಕೃತಿ, ‘ನಾ ಕಂಡ ಮಥುರಾ' ಪ್ರವಾಸ ಕಥನ ರಚಿಸಿದ್ದೇನೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಪರಿಷತ್ತು ಸಾಹಿತಿಗಳ ಮನೆಗೆ ಬಂದು ಕಾರ್ಯಕ್ರಮ ಆಯೋಜಿಸಿ ಅವರ ಬದುಕಿನ ಸಂವೇದನೆಗಳನ್ನು ಸುತ್ತಲಿನ ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಾಜಕುಮಾರ ಅಲ್ಲೂರೆ ಸಂವಾದ ನಡೆಸಿಕೊಟ್ಟರು. ಕೇಶವ ದಡ್ಡೆ ಕವನ ವಾಚನ ಮಾಡಿದರು. ರೇಣುಕಾ ಓಂಪ್ರಕಾಶ ದಡ್ಡೆ ದಂಪತಿಯನ್ನು ಸನ್ಮಾನಿಸಲಾಯಿತು.

ಸಾಹಿತಿಗಳಾದ ಎಂ. ಜಿ. ದೇಶಪಾಂಡೆ, ರಘುಶಂಖ ಭಾತಂಬ್ರಾ, ಶಿವಕುಮಾರ ಕಟ್ಟೆ. ಬಾಬುರಾವ್ ದಾನಿ. ಬಿ.ಜೆ.ವಿಷ್ಣುಕಾಂತ .ರಮೇಶ ಬಿರಾದಾರ. ಸಂಜೀವಕುಮಾರ ಅತಿವಾಳೆ. ದೇವೇಂದ್ರ ಕರಂಜೆ. ಡಾ. ಬಸವರಾಜ ಬಲ್ಲೂರ, ಜಗನ್ನಾಥ ಕಮಲಾಪುರೆ, ಉಪನ್ಯಾಸಕರಾದ ಪ್ರೇಮನಾಥ ಪಂಚಾಳ. ರಮೇಶ ಪಾಟೀಲ. ಬಾಲಾಜಿ ಅಶೋಕ ಬುದಿಯಾಳ ಸುಭಾಷ ರಾಠೋಡ ಶಿವಶಂಕರ್ ಇದ್ದರು.

ರುಕ್ಮೊದ್ದಿನ್ ಇಸ್ಲಾಂಪೂರ ಸ್ವಾಗತಿಸಿದರು. ಕಲ್ಯಾಣರಾವ್ ಚಳಕಾಪೂರೆ ನಿರೂಪಿಸಿದರು. ಟಿ ಎಂ ಮಚ್ಚೆ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.