ADVERTISEMENT

ಪರಿಸರ ಜಾಗೃತಿಗೆ ಮ್ಯಾರಥಾನ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 15:47 IST
Last Updated 6 ಆಗಸ್ಟ್ 2019, 15:47 IST
ಹಸಿರು ಕರ್ನಾಟಕ ಯೋಜನೆಯಡಿ ಬೀದರ್‌ನಲ್ಲಿ ಮಂಗಳವಾರ ಪರಿಸರ ಜಾಗೃತಿಗಾಗಿ ಮ್ಯಾರಥಾನ್‌ ನಡೆಯಿತು
ಹಸಿರು ಕರ್ನಾಟಕ ಯೋಜನೆಯಡಿ ಬೀದರ್‌ನಲ್ಲಿ ಮಂಗಳವಾರ ಪರಿಸರ ಜಾಗೃತಿಗಾಗಿ ಮ್ಯಾರಥಾನ್‌ ನಡೆಯಿತು   

ಬೀದರ್: ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವತಿಯಿಂದ ನಗರದಲ್ಲಿ ಮಂಗಳವಾರ ಮ್ಯಾರಥಾನ್ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಮ್ಯಾರಥಾನ್ ನಗರದ ಪ್ರಮುಖ ಬೀದಿಗಳ ಮೂಲಕ ಚೌಬಾರಾಕ್ಕೆ ತಲುಪಿ ಮುಕ್ತಾಯಗೊಂಡಿತು.

ಮ್ಯಾರಾಥನ್‌ಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ‘ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಅಗತ್ಯ ಇದೆ’ ಎಂದು ಹೇಳಿದರು.

ADVERTISEMENT

‘ಹಸಿರು ಕರ್ನಾಟಕ ಯೋಜನೆಯಡಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಆವರಣಗಳಲ್ಲಿ ಸಸಿ ನೆಡಬೇಕು. ಪ್ರತಿಯೊಬ್ಬರು ತಮ್ಮ ಮನೆ ಸುತ್ತ ಐದು ಸಸಿಗಳನ್ನು ನೆಡಬೇಕು. ಈ ಮೂಲಕ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಮಾತನಾಡಿ, ‘ಪರಿಸರ ಸಮತೋಲನ ಕಾಪಾಡಲು ಮರ ಗಿಡಗಳನ್ನು ಬೆಳೆಸಬೇಕು’ ಎಂದು ಹೇಳಿದರು.

ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್. ಮಾತನಾಡಿ, ‘ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ ಹಾಗೂ ಜಿಲ್ಲೆಗೊಂದು ಕಾಡು ಬೆಳೆಸುವುದು ಹಸಿರು ಕರ್ನಾಟಕ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಈಚಿನ ದಿನಗಳಲ್ಲಿ ರಾಜ್ಯದಲ್ಲಿ ಅರಣ್ಯ ಪ್ರಮಾಣದಲ್ಲಿ ಕೊಂಚ ಸುಧಾರಣೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಸಿಗಳನ್ನು ನೆಡಬೇಕು. ಹಸಿರು ಕರ್ನಾಟಕ ಯೋಜನೆ ಯಶಸ್ವಿಗೊಳಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣಕುಮಾರ, ಎ.ಬಿ. ಪಾಟೀಲ, ವಿ.ಡಿ. ರಾಜೇಂದ್ರ, ಪ್ರವೀಣಕುಮಾರ ಮೋರೆ, ಪ್ರಕಾಶ ನಿಪ್ಪಾಣಿ ಇದ್ದರು.

ಮ್ಯಾರಾಥಾನ್‌ನಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.