ADVERTISEMENT

ಗಾಳಿಯಲ್ಲಿ ಗುಂಡು ಪ್ರಕರಣಕ್ಕೆ ಶಾಸಕ ರಾಜಶೇಖರ ಪಾಟೀಲರೇ ಹೊಣೆ: ಡಾ.ಸಿದ್ದು ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 3:56 IST
Last Updated 2 ಏಪ್ರಿಲ್ 2021, 3:56 IST
ಸಿದ್ದು ಪಾಟೀಲ
ಸಿದ್ದು ಪಾಟೀಲ   

ಹುಮನಾಬಾದ್: ‘ಪಟ್ಟಣದಲ್ಲಿ ಬುಧವಾರ ಪೊಲೀಸರಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಪ್ರಕರಣಕ್ಕೆ ಶಾಸಕ ರಾಜಶೇಖರ ಪಾಟೀಲ ಅವರೇ ಹೊಣೆ’ ಎಂದು ಬಿಜೆಪಿ ಯುವ ಮುಖಂಡ ಡಾ.ಸಿದ್ದು ಪಾಟೀಲ ಆರೋಪಿಸಿದ್ದಾರೆ.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಲೂರ್‌ ರಸ್ತೆಯಲ್ಲಿ 6 ವರ್ಷದ ಹಿಂದೆ ನಾಗೇಶ್ವರಿ ಹೋಟೆಲ್ ನಡೆಸಲಾಗುತ್ತಿದ್ದು, ಇದರ ಪಕ್ಕದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶಾಸಕರು ನಿವೇಶನ ಖರೀದಿಸಿ ನೋಂದಣಿ ಮಾಡಿ ಕೊಂಡಿದ್ದಾರೆ. ಇನ್ನೂ ಮುಟೇಷನ್ ಆಗಿಲ್ಲ. ಆದರೂ ಶಾಸಕರ ಸಮ್ಮುಖ ದಲ್ಲಿ ಪೊಲೀಸ್‌ ಅಧಿಕಾರಿಗಳು, ಟೌನ್ ಪ್ಲ್ಯಾನಿಂಗ್ ಅಧಿಕಾರಿಗಳು ಅಕ್ಕಪಕ್ಕದವರಿಗೆ ನೋಟಿಸ್ ನೀಡದೇ ಬೌಂಡರಿ ನಿರ್ಧಾರ ಮಾಡುತ್ತಿದ್ದರು. ಆಗ ನಾನು ನೋಟಿಸ್ ನೀಡದೇ ನಿವೇಶನ ಅಳತೆ ಮಾಡುತ್ತಿರುವುದರ ಬಗ್ಗೆ ಅಧಿಕಾರಿಗಳನ್ನು ಕೇಳುತ್ತಿದ್ದಾಗ ಶಾಸಕರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಆಗ ಬಂದ ಶಾಸಕರ ಸಹೋದರರಾದ ಎಂಎಲ್‍ಸಿ ಡಾ. ಚಂದ್ರಶೇಖರ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ ಸಹ ಕೊಲೆ ಬೆದರಿಕೆ ಹಾಕಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎನ್ನುವ ಕಾರಣ ಪಿಎಸ್‍ಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ’ ಎಂದು ಹೇಳಿದರು.

‘ಜನರ ರಕ್ಷಣೆ ಮಾಡಬೇಕಾದ ಶಾಸಕರೇ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ರಕ್ಷಣೆ ದೃಷ್ಟಿಯಿಂದ ಅವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.