ADVERTISEMENT

ಯುವಕರ ಭವಿಷ್ಯ ರೂಪಿಸುವ ಶಿಕ್ಷಣ ನೀತಿ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 1:50 IST
Last Updated 11 ಅಕ್ಟೋಬರ್ 2021, 1:50 IST
ಬೀದರ್‌ನ ಗುರುನಾನಕ್ ದೇವ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ರಾಷ್ಟೀಯ ಶಿಕ್ಷಣ ನೀತಿ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮಾತನಾಡಿದರು. ರೇಷ್ಮಾ ಕೌರ್, ಬಲಬೀರ್‌ ಸಿಂಗ್, ಪ್ರೊ.ಚಂದ್ರಶೇಖರ ಸಾಲಿಮಠ, ಶಶಿಲ್‌ ನಮೋಶಿ, ಪ್ರಭು ಚವಾಣ್, ಭಗವಂತ ಖೂಬಾ, ರಹೀಂ ಖಾನ್‌, ಶರಣು ಸಲಗರ ಇದ್ದಾರೆ
ಬೀದರ್‌ನ ಗುರುನಾನಕ್ ದೇವ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ರಾಷ್ಟೀಯ ಶಿಕ್ಷಣ ನೀತಿ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮಾತನಾಡಿದರು. ರೇಷ್ಮಾ ಕೌರ್, ಬಲಬೀರ್‌ ಸಿಂಗ್, ಪ್ರೊ.ಚಂದ್ರಶೇಖರ ಸಾಲಿಮಠ, ಶಶಿಲ್‌ ನಮೋಶಿ, ಪ್ರಭು ಚವಾಣ್, ಭಗವಂತ ಖೂಬಾ, ರಹೀಂ ಖಾನ್‌, ಶರಣು ಸಲಗರ ಇದ್ದಾರೆ   

ಬೀದರ್‌: ‘ಸಮಾಜದಲ್ಲಿ ಸುಧಾರಣೆ ತಂದು ಯುವಕರ ಭವಿಷ್ಯ ರೂಪಿಸುವ ದಿಸೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ’ ಎಂದು ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ನಗರದ ಗುರುನಾನಕ್ ದೇವ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ರಾಷ್ಟೀಯ ಶಿಕ್ಷಣ ನೀತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘34 ವರ್ಷಗಳ ನಂತರ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಇದು ಹಂತ ಹಂತವಾಗಿ ಅನುಷ್ಠಾನಗೊಳ್ಳುವುದರಿಂದ 15 ವರ್ಷದೊಳಗೆ ಗುರಿ ಸಾಧಿಸಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಒಬ್ಬ ವಿದ್ಯಾರ್ಥಿಯು ತನ್ನ ಆಸಕ್ತಿ ಮತ್ತು ಸಾಮರ್ಥ್ಯದ ಕ್ಷೇತ್ರದಲ್ಲಿ ಹೇಗೆ ಮುಂದುವರಿಯಬೇಕು ಎನ್ನುವ ವಿಷಯದಲ್ಲಿ ಸಹಕಾರ ನೀಡಲಿದೆ. ದೇಶದ ನೂರಾರು ಕೋಟಿ ಜನರು ಗುಣಮಟ್ಟದ ಜೀವನ ನಡೆಸಲು ಹಾಗೂ ಬದುಕು ಸಾರ್ಥಕ ಪಡಿಸಿಕೊಳ್ಳಲು ಜ್ಞಾನವೇ ಮುಖ್ಯವಾಗಿದೆ. ಸಮಾಜದಲ್ಲಿ ಸದೃಢತೆಯನ್ನು ತರಲು ಹೊಸ ಶಿಕ್ಷಣ ನೀತಿ ಅನುಕೂಲವಾಗಿದೆ’ ಎಂದರು.

ಕೇಂದ್ರ ನವೀಕರಿಸಬಹುದಾದ ಇಂಧನಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ, ‘ದೇಶದ ಮೂಲೆ ಮೂಲೆಗಳಲ್ಲಿರುವ ತಜ್ಞರಿಂದ ಸಲಹೆ ಪಡೆದು ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿ, ‘ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ’ ಎಂದು ಹೇಳಿದರು.

ಶಾಸಕ ರಹೀಂ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಪೋದ್ದಿನ್‌ ಕಚೇರಿವಾಲೆ, ಕಾಲೇಜು ತಾಂತ್ರಿ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ ಪಿ., ಜಿಲ್ಲಾಧಿಕಾರಿ ರಾಮಚಂದ್ರನ್.ಆರ್, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಚಂದ್ರಶೇಖರ ಸಾಲಿಮಠ, ಶ್ರೀ ನಾನಕ ಝೀರಾ ಸಾಹಿಬ್ ಫೌಂಡೇಷನ್‌ ಅಧ್ಯಕ್ಷ ಬಲಬೀರ್‌ ಸಿಂಗ್, ಗುರುನಾನಕ್ ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷೆ ರೇಷ್ಮಾ ಕೌರ್, ಗುರುನಾನಕ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಶ್ಯಾಮಲಾ ದತ್ತಾ, ಗುರುನಾನಕ್ ದೇವ ಎಂಜನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ರವೀಂದ್ರ ಏಕಲಾರಕರ್, ಅಕಾಡೆಮಿಕ್ಸ್‌ನ ಕರ್ನಲ್‌ ಬಿ.ಎಸ್. ಧಾಲಿವಾಲ್ ಇದ್ದರು.

ಪ್ರೊ.ಶಿವಕುಮಾರ ಉಪ್ಪೆ ನಿರೂಪಿಸಿದರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಗುಲಬರ್ಗಾ ವಿಶ್ವವಿದ್ಯಾಲಯ, ಗುರುನಾನಕ ಪ್ರಥಮ ದರ್ಜೆ ಕಾಲೇಜು ಹಾಗೂ ಗುರುನಾನಕ್ ದೇವ ಎಂಜನಿಯರಿಂಗ್‌ ಕಾಲೇಜಿನ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.