ಬೀದರ್: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಬೀದರ್ ತಾಲ್ಲೂಕಿನ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಸಾಮಾನ್ಯ ತ್ಯಾಜ್ಯ ಜಲ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸಿದರು.
ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಖುದ್ದು ಭೌತಿಕ ವೀಕ್ಷಣೆ ಮಾಡಿದರು. ಇದಕ್ಕೂ ಮೊದಲು ಘಟಕ ನಿರ್ಮಾಣದ
ಹೊಣೆ ಹೊತ್ತಿರುವ ಮೇ ಚೇತ್ರಾ ಇರಿಗೇಶನ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೋವಿಡ್ 19 ಕಾರಣ ಕಾಮಗಾರಿ ವಿಳಂಬವಾಗಿದೆ. ಪ್ರಸ್ತುತ ಶೇ 65ರಷ್ಟು ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಅಗತ್ಯ ಯಂತ್ರೋಪಕರಣಗಳು ಈಗಾಗಲೇ ಘಟಕಕ್ಕೆ ಬಂದಿವೆ ಎಂದು ಮೇ ಚೇತ್ರಾ ಇರಿಗೇಶನ್ ಅಧಿಕಾರಿಗಳು ತಿಳಿಸಿದರು.
ಸಾಮಾನ್ಯ ತ್ಯಾಜ್ಯ ಜಲ ಸಂಸ್ಕರಣ ಘಟಕ ನಿರ್ಮಾಣ ಕಾಮಗಾರಿ ತ್ವರಿತವಾಗಿ ನಡೆಯಬೇಕು. ಡಿಸೆಂಬರ್ ಮೂರನೇ ವಾರದಲ್ಲಿ ಘಟಕವನ್ನು ಪ್ರಾಯೋಗಿಕವಾಗಿ ಆರಂಭಿಸಬೇಕು. 2021ರ ಮಾರ್ಚ್ಗೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ, ಉಪ ನಿರ್ದೇಶಕ ದೇವಿಂದ್ರಪ್ಪ, ಕೆಮಿಕಲ್ ಇಂಡಸ್ಟ್ರೀಸ್ ಸಂಘದ ಪ್ರತಿನಿಧಿಗಳು, ಮೇ ಚೇತ್ರಾ ಇರಿಗೇಶನ್ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.