ಹುಲಸೂರ: ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರ ಓಣಿಯಲ್ಲಿ ಚರಂಡಿ ಇಲ್ಲ. ಸುತ್ತಲು ಮುಳ್ಳಿನ ಕಂಟಿ–ಹುಲ್ಲು ಬೆಳೆದಿದೆ. ವಿಷಜಂತುಗಳ ಕಾಟವೂ ಇದೆ. ಭಯದ ವಾತಾವರಣದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಪರಿಹರಿಸಬೇಕು ಎಂದು ನಿವಾಸಿಗಳು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಾಬೂಳಗೆ ಅವರಿಗೆ ಮನವಿ ಮಾಡಿದ್ದಾರೆ.
ಮಳೆಗಾಲದಲ್ಲಿ ಸುತ್ತಲಿನ ಜಮೀನಿನ ನೀರು ಪರಿಶಿಷ್ಟ ಜಾತಿಯ ಸಮುದಾಯದವರ ಓಣಿಗೆ ನುಗ್ಗುತ್ತದೆ. ತಿಂಗಳಾನುಗಟ್ಟಲೇ ಸಂಗ್ರಹಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಚರಂಡಿ ನಿರ್ಮಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಕೆರೆ ಇದೆ. ಅದಕ್ಕೆ ತಡೆಗೋಡೆ ನಿರ್ಮಿಸಿಲ್ಲ. ಮಕ್ಕಳು ಅದರಲ್ಲಿ ಬೀಳುವ ಸಾಧ್ಯತೆ ಇದೆ. ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಅಂಗನವಾಡಿ ಕೇಂದ್ರ ಬಳಕೆ ಮಾಡದೇ ಇರುವ ಕಾರಣ ಸುತ್ತಲು ಹುಲ್ಲು, ಮುಳ್ಳಿನ ಕಂಟಿ ಬೆಳೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ಕೋಣೆಗಳು ಶಿಥಿಲಾವಸ್ಥೆ ತಲುಪಿವೆ. ಅವುಗಳನ್ನು ನೆಲಸಮ ಮಾಡಬೇಕು ಎಂದರು. ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರ ಓಣಿಗೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬೂಳಗೆ ಹಾಗೂ ಉಪನಿರ್ದೇಶಕ ಸಂತೋಷ ಚೌವ್ಹಾಣ್ ಅವರು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
‘ಶಾಲೆಯ ಮುಂಭಾಗದ ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ₹10 ಲಕ್ಷ ಕಾಯ್ದಿರಿಸಲಾಗಿದೆ. ಶಾಲೆ ಸುತ್ತಲಿನ ಮುಳ್ಳು–ಕಂಟಿ ತೆರವಿಗೆ ಆದೇಶಿಸಲಾ ಗಿದೆ. ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಇಒ ಮಹಾದೇವ ಬಾಬೂಳಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.