ಬೀದರ್: ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ನೆರವಾಗಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಇಲ್ಲಿಯ ಪ್ರತಾಪನಗರದ ಜನಸೇವಾ ಸಭಾ ಮಂಟಪದಲ್ಲಿ ಸಾಂಪ್ರದಾಯಿಕ ಮಸಾಲೆ ಪದಾರ್ಥ ತಯಾರಿಕೆ ವಿಶೇಷ ತರಬೇತಿ ನೀಡಿತು.
ತರಬೇತಿಯಲ್ಲಿ 21 ಮಸಾಲೆ ಪದಾರ್ಥಗಳ ತಯಾರಿಕೆ ಬಗೆ ಹೇಳಿಕೊಡಲಾಯಿತು. ಸ್ಥಳದಲ್ಲೇ ಕೆಲ ಪದಾರ್ಥಗಳನ್ನು ಸಿದ್ಧಪಡಿಸಿ ತೋರಿಸಲಾಯಿತು. ಶಿಬಿರವನ್ನು ಉದ್ಘಾಟಿಸಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸ್ವ ಉದ್ಯೋಗ ಉಪ ಸಮಿತಿಯ ಅಧ್ಯಕ್ಷೆ ಮಂಜುಳಾ ಡೊಳ್ಳಿ ಮಾತನಾಡಿ, ಈಚಿನ ದಿನಗಳಲ್ಲಿ ನಾಲಿಗೆ ರುಚಿಗಾಗಿ ಜಂಕ್ ಫುಡ್ ಸೇವನೆ ಅತಿಯಾಗಿದ್ದು, ಅನೇಕ ರೋಗಗಳಿಗೆ ಕಾರಣ ಆಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ ಮಸಾಲೆ ಪದಾರ್ಥಗಳ ತಯಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಮಸಾಲೆ ಪದಾರ್ಥಗಳ ತಯಾರಿಕೆಯಿಂದ ಮಹಿಳೆಯರು ಸ್ವ ಉದ್ಯೋಗ ಕಂಡುಕೊಳ್ಳಬಹುದು. ಸಾಂಪ್ರದಾಯಿಕ ಆಹಾರ ಪದ್ಧತಿ ಅನುಸರಿಸಲು ಉತ್ತೇಜನವನ್ನೂ ನೀಡಬಹುದು ಎಂದು ತಿಳಿಸಿದರು.
ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಸಂಘದಿಂದ ಜಿಲ್ಲೆಯಲ್ಲಿ ಮಹಿಳೆಯರಿಗೆ ವಿವಿಧ ತರಬೇತಿ, ಮನೆ ಮದ್ದು, ಆಪ್ತ ಸಮಾಲೋಚನೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಾಂಪ್ರದಾಯಿಕ ಮಸಾಲೆ ಪದಾರ್ಥ ತಯಾರಿಕೆ ತರಬೇತಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಮಸಾಲೆ ಪದಾರ್ಥ ತಯಾರಿಕೆ ಮಾಹಿತಿ ಒಳಗೊಂಡ ಸಾಹಿತ್ಯ ಉಚಿತವಾಗಿ ವಿತರಿಸಲಾಯಿತು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿ ದುರ್ಗಾನಾ ಬೇಗಂ ಉಪಸ್ಥಿತರಿದ್ದರು. ಜಿಲ್ಲಾ ಪ್ರಮುಖ ರೇವಣಸಿದ್ದ ಜಾಡರ್ ನಿರೂಪಿಸಿದರು. ಸಂಚಾಲಕ ಸಚಿನ್ ನಾಗೂರೆ ಸ್ವಾಗತಿಸಿದರು. ಪ್ರಶಾಂತ ಸಿಂಧೆ ವಂದಿಸಿದರು.
ಬೀದರ್, ಔರಾದ್, ಕಮಲನಗರ ಹಾಗೂ ಭಾಲ್ಕಿ ತಾಲ್ಲೂಕುಗಳ ಸಾವಿರಕ್ಕೂ ಹೆಚ್ಚು ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.