ಔರಾದ್: ಮುಂಗಾರು ಪೂರ್ವ ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಈ ವಾರದಲ್ಲಿ ಸುರಿದ ಮಳೆಯಿಂದಾಗಿ ಹೊಲಗಳಲ್ಲಿ ನೀರು ಹರಿದಿದೆ. ಹಳ್ಳ ಕೊಳ್ಳ ಹಾಗೂ ಬಾವಿಗಳಲ್ಲಿ ನೀರು ಬಂದಿದೆ. ಉತ್ತಮ ಮುಂಗಾರು ನಿರೀಕ್ಷೆಯಲ್ಲಿರುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಿತ್ತನೆಗಾಗಿ ಸಿದ್ಧತೆ ನಡೆಸಿದ್ದಾರೆ.
‘ತಾಲ್ಲೂಕಿನಲ್ಲಿ 43,010 ಹೆಕ್ಟೇರ್ ಸೋಯಾಬಿನ್ ಸೇರಿದಂತೆ ಒಟ್ಟು 64,677 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದಕ್ಕಾಗಿ 18700 ಕ್ವಿಂಟಲ್ ಬೀಜಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. 4,599 ಕ್ವಿಂಟಲ್ ಬೀಜದ ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.
‘ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರ ಸೇರಿದಂತೆ 23 ಕಡೆ ಬೀಜ ವಿತರಣೆ ಕೇಂದ್ರ ತೆರೆಯಲಾಗಿದೆ. ಎಲ್ಲ ರೈತರಿಗೆ ಬೀಜ ಸಿಗಲಿದ್ದು, ಗೊಂದಲ, ಆತಂಕಕ್ಕೆ ಒಳಗಾಗಬಾರದು ಎಂದು ಅವರು ರೈತರಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ತಾಲ್ಲೂಕಿನಲ್ಲಿ 100 ಮಿ.ಮೀ ಜಾಸ್ತಿ ಮುಂಗಾರು ಪೂರ್ವ ಮಳೆಯಾಗಿದೆ. ಆದರೆ ಇದು ಬಿತ್ತನೆ ಸಮಯ ಅಲ್ಲ. ಸಿದ್ಧತೆ ಮಾಡಿಕೊಂಡು ಜೂನ್ 7ರ ನಂತರವೇ ಬಿತ್ತನೆ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.
‘ಸೋಯಾಬಿನ್ ಬಿತ್ತನೆಗೆ ಅವಸರ ಮಾಡಬಾರದು. 75 ರಿಂದ 80 ಮಿ.ಮೀ ಮಳೆಯಾದರೆ ಮಾತ್ರ ಬಿತ್ತನೆ ಮಾಡಬೇಕು. ಹಾಗೂ 4 ರಿಂದ 5 ಸೆ.ಮೀ. ಆಳದಲ್ಲಿ ಮಾತ್ರ ಬಿತ್ತನೆ ಮಾಡಬೇಕು. ಸೋಯಾ ಎಣ್ಣೆ ಕಾಳು ಬೆಳೆ ಆಗಿರುವುದರಿಂದ ಡಿಎಪಿ ಬದಲಾಗಿ ಎನ್ಪಿಕೆ ಕಾಂಪ್ಲೆಕ್ಸ್ ಗೊಬ್ಬರ ಬಳಸಿದರೆ ಗುಣಮಟ್ಟದ ಹಾಗೂ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ರೈತರಿಗೆ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.