ಬೀದರ್: ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಬೇಕು ಎನ್ನುವ ಆಶಯದೊಂದಿಗೆ ಚೆನ್ನೈನಿಂದ ಬೈಕ್ನಲ್ಲಿ ಯಾತ್ರೆ ಕೈಗೊಂಡಿರುವ ಚೆನ್ನೈನ ರಾಜಲಕ್ಷ್ಮಿ ಮಂದಾ ಗುರುವಾರ ನಗರಕ್ಕೆ ಬಂದರು.
ಬೈಕ್ನಲ್ಲಿ 24 ಜಿಲ್ಲೆಗಳ ಮೂಲಕ 2,040 ಕಿ.ಮೀ ಕ್ರಮಿಸಿ ನಗರಕ್ಕೆ ಬಂದ ಅವರನ್ನು ಚಿದ್ರಿ ರಸ್ತೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಮಾಯಾದೇವಿ ಸಿಂಧನಕೇರಾ, ಪ್ರಧಾನ ಕಾರ್ಯದರ್ಶಿ ಲುಂಬಿಣಿ ಗೌತಮ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಸ್ವಾಗತಿಸಿದರು.
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜಲಕ್ಷ್ಮಿ, ‘ನಾಲ್ಕೂವರೆ ವರ್ಷಗಳಲ್ಲಿ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಮೋದಿ ಇನ್ನೊಂದು ಬಾರಿಗೆ ದೇಶದ ಪ್ರಧಾನಿಯಾದರೆ ಭಾರತ ಇನ್ನಷ್ಟು ಪ್ರಗತಿ ಸಾಧಿಸಲಿದೆ’ ಎಂದು ತಿಳಿಸಿದರು.
‘ಪಕ್ಷದ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಈ ಮೂಲಕ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.
ಲುಂಬಿಣಿ ಗೌತಮ ಅವರೂ ಬೈಕ್ನಲ್ಲಿ ಸಾಗಿ ಉತ್ಸಾಹ ತುಂಬಿದರು. ರಾಜಲಕ್ಷ್ಮಿ ಮಂದಾ ಅವರೊಂದಿಗೆ ವಾಹನದಲ್ಲಿ 25 ಜನರ ತಂಡ ಬಂದಿದೆ. ರಾಜಲಕ್ಷ್ಮಿ ಯಾದಗಿರಿ, ಸೇಡಂ, ಚಿಂಚೋಳಿ ಮಾರ್ಗವಾಗಿ ಬೀದರ್ ಜಿಲ್ಲೆಗೆ ಬಂದಿದ್ದು, ಶುಕ್ರವಾರ ಕಲಬುರ್ಗಿಗೆ ಪ್ರಯಾಣ ಬೆಳೆಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.