ADVERTISEMENT

ವಿದ್ಯುತ್ ವೈರ್ ಕಳ್ಳರ ಹುಡುಕಿ ಕೊಟ್ಟರೆ ಬಹುಮಾನ: ಗ್ರಾಮ ಪಂಚಾಯಿತಿಯಿಂದ ಘೋಷಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 2:31 IST
Last Updated 4 ಅಕ್ಟೋಬರ್ 2022, 2:31 IST
   

ಜನವಾಡ: ಬೀದರ್ ತಾಲ್ಲೂಕಿನ ಚಿಕ್ಕಪೇಟೆಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಘಟಕದ ವಿದ್ಯುತ್ ಸಂಪರ್ಕದ ವೈರ್ ಹಾಗೂ ಇತರ ಸಾಮಗ್ರಿ ಕಳವು ಮಾಡುತ್ತಿರುವವರನ್ನು ಹುಡುಕಿ ಕೊಟ್ಟವರಿಗೆ ₹1 ಸಾವಿರ ಬಹುಮಾನ ನೀಡುವುದಾಗಿ ಮರಕಲ್ ಗ್ರಾಮ ಪಂಚಾಯಿತಿ ಘೋಷಿಸಿದೆ.

ಚಿಕ್ಕಪೇಟೆ ಗ್ರಾಮದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟು ಮಾಡಲು ಕೆಲ ಕಿಡಿಗೇಡಿಗಳು ಪದೇ ಪದೇ ಸಾರ್ವಜನಿಕ ಕುಡಿಯುವ ನೀರಿನ ಘಟಕದ ವೈರ್ ಹಾಗೂ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿರುವುದು ಗ್ರಾಮ ಪಂಚಾಯಿತಿ ಗಮನಕ್ಕೆ ಬಂದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಕೆಲವರು ಕಳವು ಮಾಡುತ್ತಿರುವ ಸಾಮಗ್ರಿಗಳು ಅವರಿಗೆ ಹೆಚ್ಚಿನ ಲಾಭ ತಂದು ಕೊಡುವುದಿಲ್ಲ.ಗ್ರಾಮದಲ್ಲಿನ ಸುಸೂತ್ರ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಅಡ್ಡಿ ಉಂಟು ಮಾಡುವುದು ಹಾಗೂ ಕುಡಿಯುವ ನೀರಿನ ಕೃತಕ ಅಭಾವ ಸೃಷ್ಟಿಸುವುದು ಸಾಮಗ್ರಿ ಕಳವಿನ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕ್ಷುಲ್ಲಕ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.ಸಾಕ್ಷಿ ಸಮೇತ ಕಳ್ಳತನ ಮಾಡುವವರ ಮಾಹಿತಿ ನೀಡಿದವರಿಗೆ ಪಂಚಾಯಿತಿಯಿಂದ ಒಂದು ಸಾವಿರ ರೂಪಾಯಿ ಬಹುಮಾನ ನೀಡಿ, ಸನ್ಮಾನ ಮಾಡಲಾಗುವುದು. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.