ಜನವಾಡ: ‘ಗಡಿ ಭಾಗದ ಜನ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮಲು ಬರೂರು ಹೇಳಿದರು.
ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗಡಿನಾಡು ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಗಡಿಯಲ್ಲಿ ಇರುವವರು ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳನ್ನು ಬಳಸಿದರೂ ಮಾತೃಭಾಷೆಗೆ ಪ್ರಾಮುಖ್ಯತೆ ಕೊಡಬೇಕು’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಕಾಂತ ಮಡಕಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಬಸವ ಪ್ರೌಢಶಾಲೆಯ ಭಾಗ್ಯಜ್ಯೋತಿ ಮಾತನಾಡಿದರು.
ಬಾಲರಾಜ ಬರೂರು ತಂಡದ ಚರ್ಮವಾದ್ಯ, ಶಾರದಾಬಾಯಿ ಬಗದಲ್ ತಾಂಡಾ ತಂಡದ ಲಂಬಾಣಿ ನೃತ್ಯ, ಲಕ್ಷ್ಮಿ ರಮೇಶ ತಂಡದ ಕೋಲಾಟ, ಅಶ್ವಿನಿ ಹಿರೇಮಠ ಸುಗಮ ಸಂಗೀತ, ದಶರಥ ಸುತಾರ ತಂಡದ ತತ್ವಪದ, ಬೇಮಳಖೇಡದ ಡಾ. ಅಂಬೇಡ್ಕರ್ ಸಂಘದ ಭಜನೆ, ಮಾಣಿಕಮ್ಮ ಹಾಗೂ ತಂಡದ ವಚನ ಗಾಯನ, ಶಂಕರ ಮಡಿವಾಳ ಪೋಲಕಪಳ್ಳಿ ಮತ್ತು ತಂಡದ ಮೊಹರಂ ಪದ, ಮೀನಮ್ಮ ಮೀನಕೇರಿ ಹಾಗೂ ತಂಡದ ಹಂತಿ ಪದ, ರತ್ನಮ್ಮ ಬಿರಾದಾರ ಮತ್ತು ತಂಡದ ಕುಟ್ಟುವ ಪದ, ಕಸ್ತೂರಿಬಾಯಿ ಹಾಗೂ ತಂಡದ ಗೀಗೀ ಪದ, ಈಶ್ವರಮ್ಮ ಬಿರಾದಾರ ಮತ್ತು ತಂಡ, ಇಂದುಮತಿ ಪನ್ನಾಳೆ ಹಾಗೂ ತಂಡದ ಜಾನಪದ ಗಾಯನ ಗಮನ ಸೆಳೆದವು.
ಎಬಿನೇಜರ್ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಬಾಬು ಸಂಗ್ರಾಮ, ಮನ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಚಂದ್ರಕಾಂತ ರಾಗಾ, ಕರ್ನಾಟಕ ಜಾನಪದ ಪರಿಷತ್ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ರಾಜಕುಮಾರ ಮಡಕಿ, ಪಿಡಿಒ ಗೀತಾ ರೆಡ್ಡಿ, ಸುರೇಶ ಪಾಟೀಲ, ನಿರಹಂಕಾರ ಬಂಡೆ ಉಪಸ್ಥಿತರಿದ್ದರು. ಪ್ರಕಾಶ ಡೋಳೆ ನಿರೂಪಿಸಿದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ತೆರೆದ ವಾಹನದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.