ADVERTISEMENT

ಮನುಷ್ಯನ ಆತ್ಮಶುದ್ಧಿಯೇ ಅಧ್ಯಾತ್ಮ

ಅನುಭಾವ ವಿಚಾರ ಸಂಕಿರಣದಲ್ಲಿ ಸಾಹಿತಿ ಬಸವರಾಜ ಸಬರದ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 15:42 IST
Last Updated 3 ನವೆಂಬರ್ 2019, 15:42 IST
ಬೀದರ್‌ನಲ್ಲಿ ಭಾನುವಾರ ಆಯೋಜಿಸಿದ್ದ ’ಅನುಭಾವ’ ವಿಚಾರ ಸಂಕಿರಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿದರು
ಬೀದರ್‌ನಲ್ಲಿ ಭಾನುವಾರ ಆಯೋಜಿಸಿದ್ದ ’ಅನುಭಾವ’ ವಿಚಾರ ಸಂಕಿರಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿದರು   

ಬೀದರ್: ‘ಮನುಷ್ಯನ ಆತ್ಮಶುದ್ಧಿಯೇ ಅಧ್ಯಾತ್ಮ. ಸಮಾಜದ ಶುದ್ಧಿಯೇ ಅನುಭಾವ’ ಎಂದು ಹಿರಿಯ ಸಾಹಿತಿ ಬಸವರಾಜ ಸಬರದ ಅಭಿಪ್ರಾಯಪಟ್ಟರು.

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಜಿಲ್ಲಾ ರಂಗಮಂದಿರಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ ‘ಅನುಭಾವ’ ವಿಚಾರ ಸಂಕಿರಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಧ್ಯಾತ್ಮ ಹಾಗೂ ಅನುಭಾವಕ್ಕೆ ಮಹತ್ವ ಇದೆ. ಧರ್ಮ, ಭಕ್ತಿ ಹಾಗೂ ಅನುಭಾವ ಪರಸ್ಪರ ಬೆಸೆದುಕೊಂಡಿವೆ. ಇವುಗಳನ್ನು ಸರಿಯಾಗಿ ಅರ್ಥೈಸಿಕೊಂಡವರು ಅನುಭಾವಿಗಳಾಗುತ್ತಾರೆ. ಅದಕ್ಕೆ ಕೋಟಿಗೊಬ್ಬ ಶರಣ ಮತ್ತು ಕೋಟಿಗೊಬ್ಬ ಅನುಭಾವಿ ಸಿಗುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಭಾರತ ಅನುಭಾವಿಗಳ ತವರೂ. 10ನೇ ಶತಮಾನದಲ್ಲಿ ಪಂಪನು ಧರ್ಮದ ಅರಿವು ಮೂಡುಸುತ್ತದೆ ಎಂದು ಹೇಳಿದರೆ, 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ. ಮುಸ್ಲಿಂ ಚಿಂತಕರೊಬ್ಬರು ಜ್ಞಾನದಿಂದ ಶಿವಧ್ಯಾನ ಮಾಡಬೇಕು ಎಂದಿದ್ದಾರೆ. ಮನುಷ್ಯರು ಅರಿವು ಪಡೆದರೆ, ಧರ್ಮ ಪಾಲನೆ ಮಾಡಿದಂತಾಗುತ್ತದೆ’ ಎಂದರು.

ಸಾಹಿತಿಗಳಾದ ವಾಸುದೇವ ಅಗ್ನಿಹೋತ್ರಿ, ರಾಮಚಂದ್ರ ಗಣಾಪೂರ, ರಮೇಶ ಬಿರಾದಾರ, ನಾಗಶೆಟ್ಟಿ ಪಾಟೀಲ ಗಾದಗಿ ಪ್ರಿಯಾ ಲಂಜವಾಡಕರ್ ಉಪನ್ಯಾಸ ನೀಡಿದರು.

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿ, ‘ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಶಾಸ್ತ್ರಯ ಸ್ಥಾನ-ಮಾನ ನೀಡಲಾಗಿದೆ. ಕನ್ನಡ ಭಾಷೆ ಉಳಿಸಲು ಎಲ್ಲರೂ ಕಂಕಣ ಬದ್ಧರಾಗಬೇಕು’ ಎಂದರು.

ಮಹೇಶ ಮೈಲೂರಕರ್, ಚಂದ್ರಕಾಂತ ದಂಡೆ, ಕವಿತಾ ಬಂಬಳಗಿ, ವೈಜಿನಾಥ ಹುಲಸಿದ್ದಪ್ಪ ಬಾಬಶೆಟ್ಟೆ, ಅಂಜಲಿ, ರೇವಣಪ್ಪ ಮೂಲಗೆ, ಜಯಶ್ರೀ ಮೂಲಗೆ, ನಾಗೇಶ ಸ್ವಾಮಿ ಅವರು ಹಾಡುಗಳನ್ನು ಹಾಡಿ ಸಭಿಕರ ಮನ ರಂಜಿಸಿದರು.

ನೂಪೂರ ನೃತ್ಯ ಅಕಾಡೆಮಿ, ನಾಟ್ಯಶ್ರೀ ನೃತ್ಯಾಲಯ, ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಂದೇ ಮಾತರಂ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಮಕೃಷ್ಣ ಸಾಳೆ, ಶಾಂತಕುಮಾರ ಉದಗಿರೆ, ಮಂಗಲಾ ಭಾಗವತ, ಭೀಮಸೇನರಾವ್ ಕಾನಿಹಾಳ, ವಿಜಯಕುಮಾರ ಸೋನಾರೆ, ಅನಿಲಕುಮಾರ ದೇಶಮುಖ, ಎಂ.ಪಿ. ಮುದಾಳೆ, ಬಸವರಾಜ ಕೋಲಿ, ಪಿ.ಎಸ್. ಇಟಗಂಪಳ್ಳಿ, ರವಿ ದರ್ಗೆ, ಸಿದ್ರಾಮ ಸಪಾಟೆ, ದಾನಿ ಬಾಬುರಾವ್, ಭೀಮಶಾ ನಾಟೇಕಾರ, ನಿಜಲಿಂಗಪ್ಪ ತಗಾರೆ, ರಾಜಕುಮಾರ ಹೆಬ್ಬಾಳೆ, ಭಮಶೆಟ್ಟಿ ಬಿರಾದಾರ, ರಯೀಸ್ ಫಾತಿಮಾ, ಧನರಾಜ್ ಬುಕ್ಕಾ, ಗುರುನಾಥ ರಾಜಗೀರಾ ಮತ್ತು ಪ್ರಭಣ್ಣ ಸುತಾರ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಯ ಹೋರಾಟಗಾರ ಮಾಜಿ ಸಚಿವ ವೈಜಿನಾಥ ಪಾಟೀಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಉದ್ಯಮಿ ಜಯರಾಜ ಖಂಡ್ರೆ, ದಿಗಂಬರ್ ಮಡಿವಾಳ, ಸೈಯ್ಯದ್ ಸೋಹೆಲ್ ಅಹ್ಮದ್, ಶಿವಕುಮಾರ ಚನ್ನಶೆಟ್ಟಿ ಇದ್ದರು.

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು. ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಶ್ಯಾಮರಾವ್ ನೆಲವಾಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.