ಬಸವಕಲ್ಯಾಣ: ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದ್ದರಿಂದ ಸಂಕಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್ ನೀಡಿ ನೆರವು ಒದಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡ ಶರಣು ಸಲಗರ ಈಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ ಅವರಿಗೆ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದಾರೆ.
ತಾಲ್ಲೂಕಿನಲ್ಲಿ ಈಚೆಗೆ ಸತತವಾಗಿ ಮಳೆ ಸುರಿದಿದ್ದು ಬೆಳೆಗಳು ನೆಲಕಚ್ಚಿವೆ. ಹಲವೆಡೆ ನೀರು ಸಂಗ್ರಹಗೊಂಡಿದೆ. ಅನೇಕರ ಹೊಲಗಳಲ್ಲಿ ನೀರಿನ ಬುಗ್ಗೆಗಳು ಎದ್ದಿದ್ದರಿಂದ ಬೆಳೆಗಳು ನಾಶವಾಗಿವೆ. ಒಟ್ಟು 5,975 ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಮುಡಬಿ, ಮಂಠಾಳ, ಕೊಹಿನೂರ, ಹುಲಸೂರ, ಬಸವಕಲ್ಯಾಣ ಮತ್ತು ರಾಜೇಶ್ವರ ಹೋಬಳಿಗಳಲ್ಲಿ ಹಾನಿಯಾಗಿದೆ. ಈ ಭಾಗದ ರೈತರು ಮಳೆ ಆಧಾರಿತ ಕೃಷಿ ಕೈಗೊಳ್ಳುತ್ತಾರಾದ್ದರಿಂದ ಇವರಿಗೆ ಮುಂದೆ ಬೆಳೆ ಬೆಳೆಯುವುದಕ್ಕೆ ಪರ್ಯಾಯ ಇಲ್ಲದಂತಾಗಿದೆ. ಆದ್ದರಿಂದ ರೈತಾಪಿ ವರ್ಗ ತೀರ ಸಂಕಟದಲ್ಲಿದೆ. ಈ ಕಾರಣ ಶೀಘ್ರದಲ್ಲಿ ತಾಲ್ಲೂಕಿಗೆ ಭೇಟಿನೀಡಿ ಹಾನಿ ಸಮೀಕ್ಷೆ ಕೈಗೊಳ್ಳಬೇಕು. ತಾಲ್ಲೂಕುವನ್ನು ಹಸಿ ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಅವರು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.
ಪ್ರಮುಖರಾದ ರತಿಕಾಂತ ಶಿರ್ಶಿವಾಡಿ, ಸದಾನಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.