ಭಾಲ್ಕಿ: ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ಕಲಾ ತಂಡಗಳ ಮೆರವಣಿಗೆಗೆ ಸಿದ್ಧಾರೂಢ ಮಠದ ಶಂಕರನಾಂದ ಸ್ವಾಮೀಜಿ ಚಾಲನೆ ನೀಡಿದರು.
ಸಂಜೆ ಗ್ರಾಮದ ಹನುಮಾನ ಮಂದಿರದಿಂದ ಆರಂಭಗೊಂಡ ಮೆರವಣಿಗೆ ವಾಲ್ಮೀಕಿ ವೃತ್ತ, ಸಿದ್ಧಾರೂಢ ಮಠ, ಕನಕದಾಸ ವೃತ್ತ, ಮಹಾದೇವ ದೇವಸ್ಥಾನ, ಅಂಬೇಡ್ಕರ್ ಭವನದ ಮೂಲಕ ಸಾಗಿ ಹನುಮಾನ ಮಂದಿರ ತಲುಪಿತು.
ಮೆರವಣಿಗೆಯುದ್ದಕ್ಕೂ ವಿವಿಧ ಕಲಾ ತಂಡಗಳು ಪ್ರದರ್ಶಿಸಿದ ಡೊಳ್ಳು ಕುಣಿತ, ರೈತರ ಮಾದರಿ, ರಾಶಿ ಕಣ, ರಾಕ್ಷಸ ವಧೆ, ರಾಮಾಯಣದ ದೃಶ್ಯ ಕುಣಿತ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ಪ್ರದರ್ಶಿಸಿದ ಕಲೆಗಳಿಗೆ ಸಾರ್ವಜನಿಕರು ಮಾರು ಹೋಗಿದ್ದರು. ಕಲಾವಿದರಿಗೆ ಎಲ್ಲರಿಂದಲೂ ಮೆಚ್ಚುಗೆಯ ಮಹಾಪೂರ ಹರಿದುಬಂತು. ಜನರು ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಕಲಾ ತಂಡಗಳನ್ನು ಹುರಿದುಂಬಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮೀರಾಬಾಯಿ ಜನಾರ್ಧನ ಕಣಜೆ, ಉಪಾಧ್ಯಕ್ಷ ಶಿವರಾಜ ಪಾಟೀಲ, ಜಿ.ಪಂ ಸದಸ್ಯ ರವೀಂದ್ರ ರೆಡ್ಡಿ, ತಾ.ಪಂ ಸದಸ್ಯರಾದ ಕಿಶೋರ ಕುಲಕರ್ಣಿ, ಬಾಬುರಾವ್ ಪಾಟೀಲ, ಪಿಎಸ್ಐ ಹುಲೆಪ್ಪ ಜಿ, ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ಅಶೋಕ ಮೈನಳ್ಳೆ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಾ.ಗೀತಾ, ಆಡಳಿತಾಧಿಕಾರಿ ಪ್ರಕಾಶ ನಿಪ್ಪಾಣಿ, ಸಂತೋಷ ಬಿಜಿ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ. ಸುಭಾಷ ಕೆನಡೆ, ಗ್ರಾ.ಪಂ ಸದಸ್ಯರಾದ ಕಲ್ಲಪ್ಪ ರುದ್ರಪ್ಪನೋರ್, ಶಿವಪ್ಪಾ ರೊಟ್ಟಿ, ಶ್ರೀಮಂತ ರೊಟ್ಟಿ, ಬಲಭೀಮ ಬಸಲಾಪೂರ, ಹಣಮಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.