ಭಾಲ್ಕಿ: ಮೇ ತಿಂಗಳಿನಲ್ಲಿ ಸೂರ್ಯನ ಪ್ರಖರತೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ದೇಹದ ಉಷ್ಣಾಂಶ ನಿಯಂತ್ರಣದಲ್ಲಿ ಇಡಲು ಜನರು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
ಕಬ್ಬಿನ ಹಾಲು, ಎಳನೀರು, ನಿಂಬೆ ಹಣ್ಣಿನ ಪಾನಕ, ಲಸ್ಸಿ, ಬಾದಾಮ್ ಜ್ಯೂಸ್ ಸೇರಿದಂತೆ ವಿವಿಧ ತಂಪು ಪಾನೀಯ, ಐಸ್ ಕ್ರೀಮ್, ಕಲ್ಲಂಗಡಿ ಹಣ್ಣಿನ ಸಲಾಡ್ಗೆ ಜನರಿಂದ ಹೆಚ್ಚಿನ ಬೇಡಿಕೆ ಇದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೂ ಸುಡು ಬಿಸಿಲು ಜನರನ್ನು ಮನೆಯಿಂದ ಹೊರಗೆ ಕಾಲಿಡದಂತೆ ಮಾಡುತ್ತಿದೆ. ಆದರೆ ವಿವಿಧ ಕೆಲಸಗಳ ನಿಮಿತ್ತ ಜನರು ಸುಡು ಬಿಸಿಲನ್ನು ಲೆಕ್ಕಿಸದೆ ದುಡಿಯಬೇಕಾದ, ತಿರುಗಾಡಬೇಕಾದ ಅನಿವಾರ್ಯತೆ ಬದುಕು ಬಹುತೇಕ ಜನರಿಗೆ ಸೃಷ್ಟಿಸಿದೆ.
‘ಬಿಸಿಲಿನ ಧಗೆಯಿಂದ ದಣಿವಾರಿಸಿಕೊಳ್ಳಲು ತಂಪಾದ ಕಬ್ಬಿನ ಹಾಲಿಗಿಂತ ರುಚಿಕರ ಪಾನೀಯ ಇನ್ನೊಂದಿಲ್ಲ. ಈ ರಸ ಅತಿ ಪೌಷ್ಟಿಕ ಪಾನೀಯವೂ ಆಗಿದೆ. ಬೇಸಿಗೆಯಲ್ಲಿ ಇದರ ಸೇವನೆಯಿಂದ ದೇಹ ತಂಪಾಗುತ್ತದೆ’ ಎಂದು ಕಬ್ಬಿನ ಹಾಲಿನ ಅಂಗಡಿ ಮಾಲೀಕ ದತ್ತಾತ್ರಿ ಬಿರಾದಾರ ಅಭಿಪ್ರಾಯಪಡುತ್ತಾರೆ.
‘ಪ್ರತಿದಿನ 500 ರಿಂದ 700 ಗ್ಲಾಸ್ ಕಬ್ಬಿನ ಹಾಲು ಮಾರಾಟ ಆಗುತ್ತದೆ. ಮೊದಲು ಒಂದು ಗ್ಲಾಸ್ ಹಾಲಿಗೆ ₹ 10 ರೂಪಾಯಿ ದರ ಇತ್ತು. ಕಬ್ಬಿನ ದರ, ವಿದ್ಯುತ್ ಬಿಲ್, ನಿಂಬೆ ಹಣ್ಣುಗಳ ದರ ಏರಿಕೆ ಆಗಿರುವುದರಿಂದ ಈಗ ₹ 15 ರೂಪಾಯಿಗೆ ಒಂದು ಗ್ಲಾಸ್ ಹಾಲು ಮಾರಾಟ ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.
ಎಳನೀರಿಗೂ ಹೆಚ್ಚಿನ ಬೇಡಿಕೆ ಇರುವುದರಿಂದ ದರದಲ್ಲಿ ₹ 10 ರೂಪಾಯಿ ಹೆಚ್ಚಳ ಆಗಿದೆ.
‘ಇಂದಿನ ಯುವಕರಿಗೆ, ಮಕ್ಕಳಿಗೆ ಕಬ್ಬಿನ ಹಾಲಿನ ಮಹತ್ವ ಹೆಚ್ಚಾಗಿ ತಿಳಿದಿಲ್ಲ. ಹಾಗಾಗಿ, ಅವರೆಲ್ಲರೂ ಐಸ್ಕ್ರೀಮ್ ಸೇರಿದಂತೆ ಇತರ ಬಹುರಾಷ್ಟ್ರೀಯ ಕಂಪನಿಗಳು ತಯಾರಿಸಿರುವ ತಂಪು ಪಾನೀಯಗಳತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಅವುಗಳಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಲಾಭವಿಲ್ಲ’ ಎನ್ನುತ್ತಾರೆ ಸೈದಾಪುರ ವಾಡಿಯ ಕಬ್ಬಿನ ಹಾಲು ಪ್ರಿಯ ಮನೋಜ್ ಭಾಲ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.