ಬೀದರ್: ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಎರಡು ದಿನಗಳ ನಂತರ ಅದೇ ಮನೆಯ ಮಾಲೀಕನ ಕಾರನ್ನೂ ಕದ್ದೊಯ್ದಿದ್ದಾರೆ.
ಚೌಬಾರಾ ಸಮೀಪ ಬ್ರಹ್ಮನವಾಡಿಯ ಶಶಾಂಕ ಪಾಟೀಲ ಅವರ ಮನೆಯ ಬೀಗ ಮುರಿದು ₹ 53 ಸಾವಿರ ಮೌಲ್ಯದ 1 ತೊಲ ಬಂಗಾರದ ಉಂಗುರ, ₹ 52 ಸಾವಿರ ಮೌಲ್ಯದ ಬೆಳ್ಳಿಯ ತಟ್ಟೆ ಹಾಗೂ ₹ 4 ಸಾವಿರ ನಗದು ಕಳ್ಳತನ ಮಾಡಿದ್ದಾರೆ.
ಎಂಜಿನಿಯರ್ ಆಗಿರುವ ಶಶಾಂಕ ಪಾಟೀಲ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಾರೆ. ಆಗಾಗ ಬೀದರ್ಗೆ ಬಂದು ಹೋಗುತ್ತಾರೆ. ಮೇ 9 ರಂದು ಬ್ರಹ್ಮನವಾಡಿಯಲ್ಲಿರುವ ಮನೆಯ ಬೀಗ ಒಡೆದು ಕಳ್ಳತನ ಮಾಡಿರುವ ಮಾಹಿತಿ ತಿಳಿದು ಹೈದರಾಬಾದ್ನಿಂದ ಕಾರ್ನಲ್ಲಿ ಬೀದರ್ಗೆ ಬಂದಿದ್ದರು. ನಂತರ ಪೊಲೀಸರಿಗೆ ದೂರು ನೀಡಿದ್ದರು.
ಒಂದು ದಿನ ಮನೆಯಲ್ಲಿ ಉಳಿದು ಸುಜುಕಿ ಬುಲೊರೊ ಕಂಪನಿಯ ಕಾರ್ನ್ನು ಮನೆಯ ಸಮೀಪ ನಿಲ್ಲಿಸಿದ್ದರು. ನಂತರ ಮಹಾರಾಷ್ಟ್ರದ ಲಾತೂರ್ನಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಲಾತೂರ್ನಿಂದ ಬರುವಷ್ಟರಲ್ಲಿ ಕಾರನ್ನು ಸಹ ಕಳ್ಳತನ ಮಾಡಲಾಗಿದೆ.
ಬೀದರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರನ್ನು ಒಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು ಹೈದರಾಬಾದ್–ಸೋಲಾಪುರ ಟೋಲ್ ಗೇಟ್ ತಪ್ಪಿಸಿ ಕಳ್ಳದಾರಿಯಿಂದ ಕಾರು ಒಯ್ದಿದ್ದಾರೆ. ಗಂಗ್ವಾರ್ ಬಳಿ ಸಿಸಿಟಿವಿ ಕ್ಯಾಮೆರಾದಲ್ಲೂ ಕಾರಿನ ಚಿತ್ರ ಸೆರೆಯಾಗಿದೆ. ಅಂತರರಾಜ್ಯ ಕಳ್ಳರ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.