ADVERTISEMENT

ಎರಡು ಹೊಸ ರಸ್ತೆಗಳು ಮಂಜೂರು

ಶೀಘ್ರ ಕಾಮಗಾರಿ ಶುರು: ಕೇಂದ್ರ ಸಚಿವ ಖೂಬಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 13:43 IST
Last Updated 7 ಅಕ್ಟೋಬರ್ 2021, 13:43 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ಬೀದರ್ ಲೋಕಸಭಾ ಕ್ಷೇತ್ರಕ್ಕೆ ಎರಡು ಹೊಸ ರಸ್ತೆ ಹಾಗೂ ಒಂದು ಸೇತುವೆ ಮಂಜೂರಾಗಿದೆ ಎಂದು ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

₹ 110 ಕೋಟಿ ವೆಚ್ಚದ ತೆಲಂಗಾಣ ಗಡಿ ನಿಜಾಂಪೇಟ್‍ನಿಂದ ಬೀದರ್ ನೌಬಾದ್ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 163ಬಿ) ವರೆಗಿನ ರಸ್ತೆ, 30 ಕೋಟಿ ವೆಚ್ಚದ ಬೀದರ್-ಹುಮನಾಬಾದ್ ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50)ಗೆ ಸಂಪರ್ಕ ಕಲ್ಪಿಸುವ 97.20 ಕಿ.ಮೀ. ಸಮೀಪ ಸೇತುವೆ ಮತ್ತು ಧುಮ್ಮನಸೂರು ಗ್ರಾಮದಿಂದ ಹುಮನಾಬಾದ್ ಪಟ್ಟಣದ ರಾಮಚಂದ್ರ ವೀರಪ್ಪ ವೃತ್ತದ ವರೆಗೆ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ ಎಂದು ಹೇಳಿದ್ದಾರೆ.

ನಿಜಾಂಪೇಟ್-ನೌಬಾದ್ ರಸ್ತೆಯು ಸುಲ್ತಾನಪುರ, ಮಲ್ಕಾಪುರ ರಿಂಗ್ ರಸ್ತೆ, ಚಿಕ್ಕಪೇಟೆ, ಅಲಿಯಾಬಾದ್ ಮಾರ್ಗವಾಗಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ADVERTISEMENT

₹ 42.5 ಕೋಟಿ ವೆಚ್ಚದಲ್ಲಿ ಮಹಾರಾಷ್ಟ್ರ ಗಡಿಯಿಂದ ಭಾಲ್ಕಿ-ಹಲಬರ್ಗಾ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 752) ಮಾರ್ಗದಲ್ಲಿ 5 ಕಿ.ಮೀ. ರಸ್ತೆ ಹಾಗೂ ಮೂರು ಸೇತುವೆಗಳು ನಿರ್ಮಾಣಗೊಳ್ಳಲಿವೆ. 5 ಕಿ.ಮೀ. ಯಿಂದ 48.20 ಕಿ.ಮೀ. ರಸ್ತೆ ವರೆಗೆ ಅಂದರೆ ಹುಲಸೂರುದಿಂದ ಹಲಬರ್ಗಾವರೆಗೆ ವಯಾ ಭಾಲ್ಕಿ, ಕೋನಮೆಳಕುಂದಾ ರಸ್ತೆಯ ಯೋಜನಾ ವರದಿ ಸಿದ್ಧಪಡಿಸಲು ₹ 1.50 ಕೋಟಿ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

2014 ರಿಂದಲೂ ವಿವಿಧ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಆಗುತ್ತಲೇ ಇವೆ. ಇದೀಗ ಎರಡು ಹೊಸ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಲಿವೆ ಎಂದು ಖೂಬಾ ತಿಳಿಸಿದ್ದಾರೆ.

ಹೊಸ ರಸ್ತೆ, ಸೇತುವೆ ಕಾಮಗಾರಿಗಳು ಶೀಘ್ರ ಶುರುವಾಗಲಿವೆ. ಬರುವ ದಿನಗಳಲ್ಲಿ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಪರ್ಕ ವ್ಯವಸ್ಥೆ ಆಗಲಿದೆ. ಕೇಂದ್ರ ಸರ್ಕಾರ ದೇಶದೆಲ್ಲಡೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ಕಲ್ಪಿಸುತ್ತಿದೆ. ಬೀದರ್ ಕ್ಷೇತ್ರಕ್ಕೂ ಸಾಕಷ್ಟು ಅನುದಾನ ನೀಡಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.