ADVERTISEMENT

ಮರಕಲ್‍ನಲ್ಲಿ ‘ಜೀವಜಲ’ ಸಮಸ್ಯೆ

ಕೊಳವೆಬಾವಿ ಮುಂದೆ ತಡರಾತ್ರಿವರೆಗೂ ಕೊಡಗಳ ಸಾಲು: ಸಮಸ್ಯೆ ಪರಿಹಾರಕ್ಕೆ ಒತ್ತಾಯ

ನಾಗೇಶ ಪ್ರಭಾ
Published 6 ಮೇ 2020, 11:11 IST
Last Updated 6 ಮೇ 2020, 11:11 IST
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ನಲ್ಲಿಯಲ್ಲಿ ನೀರು ಹಿಡಿಯುತ್ತಿರುವ ಮಹಿಳೆಯರು
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ನಲ್ಲಿಯಲ್ಲಿ ನೀರು ಹಿಡಿಯುತ್ತಿರುವ ಮಹಿಳೆಯರು   

ಜನವಾಡ: ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆಯ ಅಂಗನವಾಡಿ ಸಂಖ್ಯೆ 1 ಇರುವ ಪ್ರದೇಶದಲ್ಲಿ ಎರಡೂವರೆ ತಿಂಗಳಿಂದ ನೀರಿಗೆ ತತ್ವಾರ ಉಂಟಾಗಿದೆ.

ನಲ್ಲಿಗೆ ನಿತ್ಯ ನೀರು ಬರದ ಕಾರಣ ಜನ ಕುಡಿಯುವ ನೀರಿನ ಅವಶ್ಯಕತೆ ಪೂರೈಸಿಕೊಳ್ಳಲು ಪರದಾಡು
ವಂತಾಗಿದೆ. ಲಾಕ್‍ಡೌನ್‍ನಿಂದ ಮನೆಯಲ್ಲಿ ಇರುವ ಜನರಿಗೆ ನೀರು ತರುವುದೇ ದೊಡ್ಡ ಕಾಯಕವಾಗಿದೆ. ಓಣಿಯ ಕೊಳವೆಬಾವಿ ಮುಂದೆ ತಡರಾತ್ರಿವರೆಗೂ ಸರದಿ ಸಾಲಿನಲ್ಲಿ ನಿಂತು ನೀರು ತುಂಬಿಕೊಳ್ಳುತ್ತಿದ್ದಾರೆ.

ADVERTISEMENT

ಪ್ರತಿ ವರ್ಷ ಬೇಸಿಗೆಯಲ್ಲಿ ಇಲ್ಲಿ ನೀರಿನ ಸಮಸ್ಯೆ ಇದ್ದದ್ದೇ. ನಲ್ಲಿಗೆ ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ. ಅದು ಕೂಡ ನಾಲ್ಕಾರು ಕೊಡ ಮಾತ್ರ. ಹೀಗಾಗಿ ಜನ ಸಮಸ್ಯೆ ಎದುರಿಸಬೇಕಾಗಿದೆ ಎಂದು ಹೇಳುತ್ತಾರೆ ಗ್ರಾಮದ ಅಂಗನವಾಡಿ ಸಂಖ್ಯೆ 1 ರ ನಿವಾಸಿ ಗುಂಡಪ್ಪ ಕಡಾಳೆ. ನಲ್ಲಿಗೆ ನಿಯಮಿತವಾಗಿ ನೀರು ಬರದೇ ಇರುವುದರಿಂದ 150 ಮೀಟರ್ ದೂರದ ಕೊಳವೆಬಾವಿಯಿಂದ ನೀರು ತರಬೇಕಾಗಿದೆ . ಪ್ರದೇಶದ ಜನ ಇದನ್ನೇ ಅವಲಂಬಿಸಿರುವುದರಿಂದ ಉದ್ದನೆಯ ಸಾಲು ಇರುತ್ತಿದೆ ಎಂದು ತಿಳಿಸುತ್ತಾರೆ.

ಕೊಳವೆಬಾವಿ ಮುಂದೆ ಕೆಲವರು ರಾತ್ರಿಯೇ ಕೊಡ ಇಟ್ಟು ಪಾಳಿ ಹಚ್ಚಿ ಹೋಗುತ್ತಿದ್ದಾರೆ. ನಸುಕಿನಲ್ಲಿ ಚಾಲು ಆಗುತ್ತಲೇ ನೀರು ತುಂಬಿಕೊಳ್ಳುತ್ತಿದ್ದಾರೆ. ಪಾಳಿಯಲ್ಲಿ ಒಬ್ಬರಿಗೆ ನಾಲ್ಕು ಕೊಡಗಳಷ್ಟೇ ನೀರು ಸಿಗುತ್ತಿದೆ. ನೂರಾರು ಕೊಡಗಳು ಇರುತ್ತಿರುವ ಕಾರಣ ಪಾಳಿ ಬರಲು ದೀರ್ಘ ಸಮಯ ಬೇಕಾಗುತ್ತಿದೆ ಎಂದು ಹೇಳುತ್ತಾರೆ.

ವಿದ್ಯುತ್ ಕೈಕೊಟ್ಟರೆ ಗಂಟೆಗಟ್ಟಲೇ ಕೊಳವೆಬಾವಿ ಮುಂದೆ ಕಾದು ಕುಳಿತುಕೊ
ಳ್ಳಬೇಕಾಗುತ್ತಿದೆ. ರಾತ್ರಿ 12 ಗಂಟೆವರೆಗೂ ಜನ ನೀರು ತುಂಬಿಕೊಂಡು ಹೋಗು
ವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ನೀರಿಗಾಗಿ ಮಾತಿನ ಚಕಮಕಿ, ಮನಸ್ತಾಪಗಳೂ ಆಗುತ್ತಿವೆ ಎಂದು ಬೇಸರದಿಂದ ನುಡಿಯುತ್ತಾರೆ.

ಓಣಿಯಲ್ಲಿ ಪೈಪ್‍ಲೈನ್ ಅಳವಡಿಸಿ ಕೊಳವೆಬಾವಿ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸುತ್ತಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ಪ್ರದೇಶದಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಪೈಪ್‍ಲೈನ್ ಅಳವಡಿಸಿ ಸಮಸ್ಯೆ ಪರಿಹರಿಸಲು ಉದ್ದೇಶಿಸಲಾಗಿದೆ. ಆದರೆ, ಲಾಕ್‍ಡೌನ್‍ನಿಂದ ಅಂಗಡಿಗಳು ಮುಚ್ಚಿರುವುದು
ತೊಡಕಾಗಿದೆ ಎಂದು ಹೇಳುತ್ತಾರೆ ಮರಕಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಡೋಣೆ. ಪೈಪ್‍ಲೈನ್ ಮೂಲಕ ನೀರಿನ ಸಮಸ್ಯೆ ಪರಿಹಾರವಾದರೆ ಒಳ್ಳೆಯದು. ಅದು ಸಾಧ್ಯವಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುವುದು ಎಂದು ಪಿಡಿಒ ಮಲ್ಲಿಕಾರ್ಜುನ ಡೋಣೆ ತಿಳಿಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.