ಬೀದರ್: ಕಾರಂಜಾ ಜಲಾಶಯದಿಂದ ಔರಾದ್ ತಾಲ್ಲೂಕಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕವು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿತು.
ಈ ವರ್ಷ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ಎರಡು ಬಾರಿ ನೀರು ಬಿಡಲಾಗಿದೆ. ಆದರೆ, ಔರಾದ್ ತಾಲ್ಲೂಕಿಗೆ ಹನಿ ನೀರು ಹರಿದಿಲ್ಲ ಎಂದು ಆರೋಪಿಸಿದರು.
ಭಾಲ್ಕಿ ತಾಲ್ಲೂಕಿಗೆ ಎರಡು ಬಾರಿ ನೀರು ಬಿಡಲಾಗಿದ್ದರೂ ಔರಾದ್ಗೆ ಒಮ್ಮೆಯೂ ಬಿಟ್ಟಿಲ್ಲ. ಭಾಲ್ಕಿ ಹಾಗೂ ಔರಾದ್ ತಾಲ್ಲೂಕುಗಳ ರೈತರ ಮಧ್ಯೆ ಏಕೆ ತಾರತಮ್ಯ ಮಾಡಲಾಗುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಸವರುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಔರಾದ್ ತಾಲ್ಲೂಕು ಮೂಲಕ ಹರಿದು ಹೋಗುವ ಮಾಂಜ್ರಾ ನದಿ ಈಗಾಗಲೇ ಬತ್ತಿ ಹೋಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾರಂಜಾ ಜಲಾಶಯದಿಂದ ತಾಲ್ಲೂಕಿಗೆ ಕೂಡಲೇ ನೀರು ಬಿಡಬೇಕು ಎಂದು ಒತ್ತಾಯಿಸಿದರು.
ಮಾಂಜ್ರಾ ನದಿಗೆ ನೀರು ಬಿಡುವವರೆಗೂ ಧರಣಿ ಮುಂದುವರಿಯಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ, ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಪ್ರಕಾಶ ಬಾವಗೆ, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮಂತ ಬಿರಾದಾರ, ಮಲ್ಲಯ್ಯ ಸ್ವಾಮಿ, ಸತ್ಯವಾನ ಪಾಟೀಲ, ಬಾಬಶೆಟ್ಟಿ ಪಾಟೀಲ, ರಮೇಶ ಮೋರ್ಗೆ, ಬಸವರಾಜ ಪಾಟೀಲ, ಅಶೋಕ ಬಿರಾದಾರ, ಗುಂಡಪ್ಪ ಬಿರಾದಾರ, ನಿರಂಜಪ್ಪ ನಮೋಶಿ, ಚನ್ನಬಸಪ್ಪ ಬಿರಾದಾರ, ಪ್ರಭು ಬಾಬಪ್ಪ ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.