ಬೀದರ್: ವಿದ್ಯಾರ್ಥಿಗಳಿಗೆ ತಮ್ಮಲಿರುವ ಆತ್ಮಸ್ಥೈರ್ಯ ಮತ್ತು ವಿಶ್ವಾಸವೇ ಗೆಲುವಿನ ಮೊದಲ ಹಂತವಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ರವೀಂದ್ರನಾಥ್ ವಿ. ಗಬಾಡಿ ತಿಳಿಸಿದರು.
ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಸಮಾಜದಲ್ಲಿ ವ್ಯಕ್ತಿತ್ವ ಮುಖ್ಯ, ನೈತಿಕ ಮೌಲ್ಯ ಸಮಯ ಪ್ರಜ್ಞೆಗೆ ಹೆಚ್ಚಿನ ಬೆಲೆಕೊಟ್ಟು ಜೀವಿಸಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಜಯಶ್ರೀ ಪ್ರಭಾ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಓದಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಯುವಕರು ಭಾರತದ ಭವಿಷ್ಯ, ಮಹಾತ್ಮ ಗಾಂಧಿಜಿಯವರ ಸ್ವಚ್ಛತೆಯ ಕನಸು ನನಸಾಗಿಸಲು ಶಿಬಿರಾರ್ಥಿಗಳು ಶ್ರಮಿಸಿದಾಗ ಮಾತ್ರ ರಾಷ್ಟ್ರೀಯ ಸೇವಾ ಯೋಜನೆಗೆ ಕೀರ್ತಿ ಬರುತ್ತದೆ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಸುಚಿತಾನಂದ ಕೆ. ಮಲ್ಕಾಪುರೆ ಮಾತನಾಡಿ, ಶ್ರದ್ದೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಯಶಸ್ಸು ಸಿಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾದ ಕಾಲೇಜಿನ ವಿದ್ಯಾರ್ಥಿಗಳಾದ ಸೂರ್ಯಕಾಂತ, ಸೋನಿಕಾ ಮತ್ತು ಅಂಬಿಕಾ ಅವರನ್ನು ಸನ್ಮಾನಿಸಲಾಯಿತು.
ಎಲಿಷ, ಚನ್ನಕೇಶ್ವವ ಮೂರ್ತಿ, ನಗ್ಮಾ ಸೋಣಾ, ಬೊಕ್ಕಲ್ ನಾಗೇಂದ್ರಪ್ಪಾ , ಬಸವರಾಜ ಕೆ, ಸುನೀಲ್ ಕುಮಾರ, ಸುರೇಶ, ನಾಗರಾಜ ಕುಲಕರ್ಣಿ, ಬಾಲಸುಬ್ರಮಣ್ಯಂ, ರೂತಾ, ಶೀಲಾ , ಶಂಕರ ಗಣಗೊಂಡ, ಜಯಭಾರತ ಮಂಗೇಶ್ಕರ್, ಅಮರದೀಪ ಮೋಘಾ , ಸುಮನಬಾಯಿ ಶಿಂಧೆ, ರಾಜಕುಮಾರ್ ಅಲ್ಲೂರೆ, ಅಶೋಕ ಕೋರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.