ADVERTISEMENT

ಬಹುಮುಖ ಪ್ರತಿಭೆ ವಚನಶ್ರೀ ನೌಬಾದೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:20 IST
Last Updated 22 ಮೇ 2022, 2:20 IST
ಖಟಕಚಿಂಚೋಳಿಯ ಕಾರ್ಯಕ್ರಮವೊಂದರಲ್ಲಿ ವಚನಶ್ರೀಯ ವಚನ ಗಾಯನ
ಖಟಕಚಿಂಚೋಳಿಯ ಕಾರ್ಯಕ್ರಮವೊಂದರಲ್ಲಿ ವಚನಶ್ರೀಯ ವಚನ ಗಾಯನ   

ಖಟಕಚಿಂಚೋಳಿ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ ಹಾಗೂ ಯೋಗ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಬಹುಮುಖ ಪ್ರತಿಭೆ ವಚನಶ್ರೀ ನೌಬಾದೆ.

ಬೀದರ್ ತಾಲ್ಲೂಕಿನ ಕೊಳಾರ (ಕೆ) ಗ್ರಾಮದ ಚನ್ನಬಸಪ್ಪ ಹಾಗೂ ಅಂಬಿಕಾ ನೌಬಾದೆ ದಂಪತಿಯ ಹಿರಿಯ ಮಗಳು. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಚನಶ್ರೀ, ಹಿಂದೂಸ್ತಾನಿ ಸಂಗೀತದಲ್ಲಿ ಜೂನಿಯರ್ ಮುಗಿಸಿದ್ದಾರೆ.

ಸಂಗೀತ ಕಲಾವಿದ ಈಶ್ವರಪ್ಪ ಪಾಂಚಾಳರ ಶಿಷ್ಯೆಯಾದ ವಚನಶ್ರೀ, ತಂದೆ ಚನ್ನಬಸಪ್ಪ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಕೆ ಹಾಗೂ ಸಾಧನೆಯಲ್ಲಿ ನಿರತವಾಗಿದ್ದಾರೆ.

ADVERTISEMENT

ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದ ಅನೇಕ ಕಡೆ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಸುಮಧುರ ಗಾಯನದ ಮೂಲಕ ಕೇಳುಗರ ಮನ ರಂಜಿಸಿದ್ದಾರೆ. ಈ ಬಾಲಕಿಯ ಪ್ರತಿಭೆ ಅರಸಿ 2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರತ್ನ ಪ್ರಶಸ್ತಿ ಬಂದಿದೆ. ಹೀಗೆ ತಮ್ಮ ಪ್ರತಿಭೆಯ ಮೂಲಕ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಮೈಗೂಡಲು ನೃತ್ಯ, ಸಂಗೀತ, ಭರತನಾಟ್ಯದಂಥ ಕಲೆಗಳು ಸಹಾಯಕ. ಹೀಗಾಗಿ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದೊಂದಿಗೆ ಸಂಗೀತ,ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು' ಎಂದು ಸಂಗೀತ ಶಿಕ್ಷಕ ಸಂಗಯ್ಯ ಸ್ವಾಮಿ ತಿಳಿಸುತ್ತಾರೆ.

‘ಮುಂದಿನ ದಿನಗಳಲ್ಲಿ ಹಿಂದೂಸ್ತಾನಿ ಸಂಗೀತದ ಸಿನಿಯರ್ ಮುಗಿಸಿ ಸಂಗೀತ ಶಿಕ್ಷಕಿಯಾಗಬೇಕು ಎನ್ನುವುದು ನನ್ನ ಆಶಯವಾಗಿದೆ. ಅಲ್ಲದೇ ಎಲ್ಲ ಮಕ್ಕಳಿಗೆ ಉಚಿತ ಸಂಗೀತ ಕಲಿಸಬೇಕು ಎಂಬುವುದು ನನ್ನ ಗುರಿಯಾಗಿದೆ' ಎಂದು ವಚನಶ್ರೀ ಹೇಳುತ್ತಾಳೆ.

*ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ದೊರೆತರೆ ಮುಂದೆ ಅವರು ಏನನ್ನಾದರೂ ಸಾಧಿಸಬಹುದು ಎಂಬುವುದಕ್ಕೆ ವಚನಶ್ರೀ ಉದಾಹರಣೆ ಆಗಿದ್ದಾರೆ
-ಸುರೇಶ ಚನಶೆಟ್ಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.