ADVERTISEMENT

ಅಂಬೇಡ್ಕರ್ ಮಾರ್ಗದರ್ಶನದಲ್ಲಿ ನಡೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 9:25 IST
Last Updated 13 ಫೆಬ್ರುವರಿ 2012, 9:25 IST

ಸಂತೇಮರಹಳ್ಳಿ: ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದರ್ಶನದಲ್ಲಿ ನಡೆಯದಿದ್ದರೆ ಛಲವಾದಿಗಳು ಮೇಲ್ವರ್ಗದವರಿಂದ ಶೋಷಣೆಗೆ ಒಳಗಾಗಬೇಕಾಗುತ್ತದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಶಿವರಾಮ್ ತಿಳಿಸಿದರು.

ಸಮೀಪದ ಹೊಂಗನೂರು ಗ್ರಾಮದಲ್ಲಿ ಭಾನು ವಾರ ನಡೆದ ಛಲವಾದಿ ಮಹಾಸಭಾ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಛಲವಾದಿಗಳು ಬಹುಸಂಖ್ಯಾತ ರಾಗಿದ್ದರೂ ಸಹ ನಮ್ಮಲ್ಲಿನ ದೌರ್ಬಲ್ಯಗಳಿಂದ ಅಧಿಕಾರ ವಂಚಿತರಾಗಿದ್ದೇವೆ. ಡಾ.ಅಂಬೇಡ್ಕರ್ ಕನಸು ನನಸು ಮಾಡದೆ ಶೊಷಣೆಗೆ ಒಳಗಾಗಿದ್ದೇವೆ ಎಂದರು.

ಹರಿದು ಹಂಚಿಹೋಗಿರುವ ಜನಾಂಗವನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಛಲವಾದಿ ಮಹಾಸಭಾ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ. ಜನಾಂಗದ ಸೇವೆ ಮಾಡಲು ರಾಜಕೀಯವೇ ಬೇಕಾಗಿಲ್ಲ. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.
 
ಜನಾಂಗದಲ್ಲಿ ಬಿನ್ನಾಭಿಪ್ರಾಯ ಬಿಟ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬಂದಾಗ ಸಾಮಾಜಿಕವಾಗಿ ಸಮಾನತೆ ಕಾಣಬಹುದು ಎಂದರು.

ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಛಲವಾದಿ ಮಹಾಸಭಾಕ್ಕೆ 2 ಎಕರೆ ಜಾಗ ನೀಡಿದೆ. ಈ ಜಾಗದಲ್ಲಿ ತರಬೇತಿ ಕೇಂದ್ರ ತೆರೆದು ನಿರುದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಶಾಸಕ ಜಿ.ಎನ್.ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್.ಬಾಲರಾಜು, ಜಿ.ಪಂ.ಸದಸ್ಯೆ ಲಕ್ಷ್ಮಿ, ಗ್ರಾ.ಪಂ.ಅಧ್ಯಕ್ಷೆ ಜಿನತ್‌ಬೀ, ಜಿಲ್ಲಾ ಛಲವಾದಿ ಅಧ್ಯಕ್ಷ ಬಸವಣ್ಣ, ಅಣಗಳ್ಳಿ ಬಸವರಾಜು, ಲಕ್ಷ್ಮಣರಾವ್, ಟಿ.ಕೆ.ರಂಗಯ್ಯ, ವೆಂಕಟಚಲಾ ಇತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.