ADVERTISEMENT

ಉಘೇ..ಉಘೇ..ಮಾದಪ್ಪ...

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:55 IST
Last Updated 12 ಡಿಸೆಂಬರ್ 2012, 10:55 IST
ಕೊಳ್ಳೇಗಾಲ ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ರಾತ್ರಿ ಕಡೇ ಕಾರ್ತಿಕದ ಪ್ರಯುಕ್ತ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು
ಕೊಳ್ಳೇಗಾಲ ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ರಾತ್ರಿ ಕಡೇ ಕಾರ್ತಿಕದ ಪ್ರಯುಕ್ತ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು   

ಕೊಳ್ಳೇಗಾಲ: ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಕಡೇ ಕಾರ್ತಿಕ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಪೊಲೀಸ್ ಠಾಣೆ ಬಳಿಯ ಕೊಳದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ ವಿಜೃಂಭಣೆ ಯಿಂದ ನಡೆಯಿತು.

ಉಘೇ...ಮಾದಪ್ಪ, ಉಘೇ..., ಮಾಯಕಾರ ಮಾದಪ್ಪನಿಗೆ ಜೈ..ಎಂಬ ಜಯಘೋಷಗಳೊಂದಿಗೆ ಚಳಿಯನ್ನೂ ಲೆಕ್ಕಿಸದೇ ಭಕ್ತರು ತೆಪ್ಪೋತ್ಸವದಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿದರು.

ದೇವಾಲಯದಿಂದ ಹೊರಟ ಸತ್ತಿಗೆ ಸೂರಿಪಾನಿ ಮತ್ತು ನಂದಿಕಂಬ ವಾದ್ಯ, ತಮಟೆ, ದೇವರ ಗುಡ್ಡರ ಮೇಳವನ್ನೊಳಗೊಂಡ ಮೆರವಣಿಗೆಗೆ ಸಾಲೂರು ಬೃಹನ್ಮಠದ ಗುರುಸ್ವಾಮಿಗಳು ಚಾಲನೆ ನೀಡಿದರು.

ವಿದ್ಯುತ್ ದೀಪಾಲಂಕೃತ ಪಲ್ಲಕ್ಕಿ ಮೂಲಕ ಮಹದೇಶ್ವರ ಉತ್ಸವ ಮೂರ್ತಿಯನ್ನು ಮೆರವಣಿ ಗೆಯಲ್ಲಿ ಕೊಳದ ಬಳಿಗೆ ತರಲಾಯಿತು.
ಹೂವಿನ ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದ ತೆಪ್ಪದ ಮಂಟಪದಲ್ಲಿ ಉತ್ಸವ ಮೂರ್ತಿ ಇಟ್ಟು ಲಕ್ಷಾಂತರ ಭಕ್ತರ ಜಯಘೋಷ ಗಳೊಂದಿಗೆ ತೆಪ್ಪೋತ್ಸವ ನಡೆಸಲಾಯಿತು.

ದೇವಾಲಯದ ಎದುರಿನ ಗುಡ್ಡದಲ್ಲಿ ಮಹ ದೇಶ್ವರ ಜ್ಯೋತಿ ಕಾರ್ಯಕ್ರಮವು ಲಕ್ಷಾಂತರ ಭಕ್ತರನ್ನು ಪುಳಕಿತರನ್ನಾಗಿಸಿತು.
ಕಡೇ ಕಾರ್ತಿಕ ಪೂಜಾ ಮಹೋತ್ಸವದ ಪ್ರಯುಕ್ತ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.

ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಭಕ್ತರಿಗೆ ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸ್ ಭದ್ರತೆ ಬಗ್ಗೆ ಆಡಳಿತಾಧಿಕಾರಿ ಜಯವಿಭವಸ್ವಾಮಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ಶಿವಲಿಂಗೇಗೌಡ, ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ರಾಮಪ್ಪ ಹಾಗೂ ದೇವಾಲಯ ಸಿಬ್ಬಂದಿ ಹೆಚ್ಚಿನ ಕಾಳಜಿ ವಹಿಸಿದ್ದರು. 400 ಭಕ್ತರು ಚಿನ್ನದ ತೇರು ಎಳೆಯುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ದೇವಾಲ ಯದಲ್ಲಿ ಒಂದೇ ದಿನದಲ್ಲಿ 11 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯದ ವಿವಿಧೆಡೆಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.